ತ್ರಿವಳಿ ಕೊಲೆ ಪ್ರಕರಣ:ಪ್ರಿಯಕರನ ವಿರುದ್ಧವೇ ಮಾಫಿ ಸಾಕ್ಷಿ ಹೇಳಲು ಸಿದ್ಧಳಾದ ಶ್ವೇತಾ
Views: 63
ಕನ್ನಡ ಕರಾವಳಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ವಿರುದ್ಧ ಮಾಫಿ ಸಾಕ್ಷಿಯಾಗಲು ಸಹ-ಆರೋಪಿಗಳು ಮುಂದಾದ ಬೆನಲ್ಲೇ, ಇಡೀ ರಾಜ್ಯವನ್ನೇ ಬೆಚ್ಚಿಬಿಳಿಸಿದ ಕೆ.ಆರ್.ಪುರಂ ತ್ರಿವಳಿ ಕೊಲೆ ಪ್ರಕರಣದಲ್ಲಿಯೂ ಮಾಫಿ ಸಾಕ್ಷಿ ಹೇಳಲು ಶ್ವೇತಾ ಸಿದ್ದಳಾಗಿದ್ದಾಳೆ.
ಪ್ರಕರಣದ ಪ್ರಮುಖ ಆರೋಪಿಯಾದ ಶ್ವೇತಾ, ತನ್ನ ಪ್ರಿಯಕರ ಕೆನತ್ ವಿರುದ್ಧವೇ ಮಾಫಿ ಸಾಕ್ಷಿ ಹೇಳಲು ಮುಂದೆ ಬಂದಿದ್ದಾಳೆ. ಪ್ರಕರಣ ಸಂಬಂಧ ಕೋರ್ಟ್ಗೆ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಶ್ವೇತಾ, ನನ್ನ ಹೆತ್ತವರು ಮತ್ತು ತಂಗಿಯನ್ನು ಕೊಂದಿದ್ದು ನನ್ನ ಪ್ರಿಯಕರ ಕೆನತ್, ನಾನು ಈ ಪ್ರಕರಣದಲ್ಲಿ ಮಾಫಿ ಸಾಕ್ಷಿ ಆಗಲು ಸಿದ್ಧಳಿದ್ದೇನೆ ಎಂದು ಅರ್ಜಿ ಸಲ್ಲಿಸಿದ್ದಾಳೆ. ಅದರಲ್ಲೂ, ಇಷ್ಟು ದಿನ ನಾನೇ ಕೊಲೆ ಮಾಡಿದ್ದು ಎಂದು ಹೇಳಿಕೆ ನೀಡುತ್ತಿದ್ದ ಶ್ವೇತಾ, ಈಗ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದಾಳೆ.
ಕೋರ್ಟ್ಗೆ ಶ್ವೇತಾ ಸಲ್ಲಿಸಿರುವ ಅರ್ಜಿಯಲ್ಲೇನಿದೆ?
29ನೇ ಎಸಿಜೆಎಂ ಕೋರ್ಟ್ಗೆ ಶ್ವೇತಾ ಸಲ್ಲಿಸಿರುವ ಅರ್ಜಿಯಲ್ಲಿ, ತಂದೆ, ತಾಯಿ ಹಾಗೂ ತಂಗಿಯನ್ನು ಕೊಲೆ ಮಾಡುವ ತೀರ್ಮಾನ ಸಂಪೂರ್ಣವಾಗಿ ಕೆನತ್ನದ್ದಾಗಿತ್ತು. ಆತನೇ ಎಲ್ಲರನ್ನೂ ಚಾಕುವಿನಿಂದ ಇರಿದು ಕೊಂದಿದ್ದಾನೆ. ನಾನು ಯಾರಿಗೂ ಚಾಕುವಿನಿಂದ ಚುಚ್ಚಿಲ್ಲ ಎಂದು ಶ್ವೇತಾ ಹೇಳಿದ್ದಾಳೆ. ಇದರೊಂದಿಗೆ, ಕೊಲೆ ನಡೆದ ಸಂದರ್ಭದಲ್ಲಿ ನಾನು ಅದೇ ಸ್ಥಳದಲ್ಲಿದ್ದೆ ನಿಜ, ಆದರೆ ನಾನು ನೇರವಾಗಿ ಕೊಲೆಯಲ್ಲಿ ಭಾಗಿಯಾಗಿಲ್ಲ.ಆದ್ದರಿಂದ ನನ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿ, ಕೆನತ್ ವಿರುದ್ಧ ಸಾಕ್ಷಿ ನುಡಿಯಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾಳೆ.
ಏತನ್ಮಧ್ಯೆ, ಪ್ರಕರಣ ಸಂಬಂಧ ಚಾರ್ಜ್ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಕೆಯಾದ ಬಳಿಕ ಈ ಬಗ್ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ ಕೋರ್ಟ್, ಶ್ವೇತಾ ಸಲ್ಲಿಸಿರುವ ಈ ಅರ್ಜಿಯನ್ನು ಸದ್ಯಕ್ಕೆ ಪುರಸ್ಕರಿಸಿಲ್ಲ. ಇದರ ನಡುವೆ, ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಕೆಲವು ಪ್ರಮುಖ ಫೋರೆನ್ಸಿಕ್ ವರದಿಗಳು ಬರಬೇಕಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ವರದಿಗಳು ಬಂದ ನಂತರವಷ್ಟೇ ಶ್ವೇತಾಳ ಹೇಳಿಕೆಯ ಸತ್ಯಾಸತ್ಯತೆ ತಿಳಿಯಲಿದೆ.
ಏನಿದು ಪ್ರಕರಣ? ಜೂನ್ 2024 ರಲ್ಲಿ ಬೆಂಗಳೂರಿನ ಸೀಗೇಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಸೋಮಸುಂದರ್ (54), ಮುತ್ತುಲಕ್ಷ್ಮಿ (48) ಮತ್ತು ಅವರ ಕಿರಿಯ ಮಗಳು ಸುಪ್ರಿಯಾ (20) ಅವರ ಭೀಕರ ಕೊಲೆಯಾಗಿತ್ತು. ಹಿರಿಯ ಮಗಳಾದ ಶ್ವೇತಾ ಮತ್ತು ಆಕೆಯ ಲಿವ್-ಇನ್ ಪಾಟ್ನರ್ರ ಕೆನತ್ ಜಂಟಿಯಾಗಿ ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಇಬ್ಬರನ್ನೂ ಪುದುಚೇರಿಯಲ್ಲಿ ಬಂಧಿಸಿದ್ದರು. ಇನ್ನು, ಪ್ರೀತಿಯ ವಿರೋಧ ಹಾಗೂ ಸಾಲದ ಬಾಧೆಯೇ ಈ ಕೊಲೆಗೆ ಕಾರಣ ಎನ್ನಲಾಗಿತ್ತು.






