ಸೃಜನಶೀಲತೆ

ನೈಜ ಭಾವ ಶಿಲ್ಪಕಲೆಯ ಕನಸುಗಾರ ಶ್ರೀತಿನ್ ಶೆಟ್ಟಿಗಾರ ಬಂಟ್ವಾಡಿ

Views: 18

ಕುಂದಾಪುರ : ಹನ್ನೆರಡು ವರ್ಷಗಳ ಹಿಂದೆ ಆಗಷ್ಟೇ ಕಲಾ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಹುಡುಗನೊಬ್ಬ ಕುಂದಾಪುರದ ಹೃದಯ ಭಾಗದ ಶಾಸ್ತ್ರಿ ಸರ್ಕಲ್ ನಲ್ಲಿರುವ ಶಾಸ್ತ್ರಿಯವರ ಪ್ರತಿಮೆ ನೋಡಿ  ನಾನೊಬ್ಬ ಶಿಲ್ಪಾ ಕಲಾವಿದನಾಗಿ ಇದೇ ಜಾಗದಲ್ಲಿ ಶಾಸ್ತ್ರೀಜಿ ಯವರ ನಿಂತಿರುವ ಭಾವಶಿಲ್ಪ ನಿರ್ಮಿಸಬೇಕೆಂದು ಕನಸು ಕಂಡಿದ್ದ. ಈ ಕನಸು ಈಗ ಸಾಕಾರಗೊಂಡಿದೆ. ಇವರೇ ನಮ್ಮೂರಿನ ಯುವ ಕಲಾವಿದ ಶ್ರೀತಿನ್ ಶೆಟ್ಟಿಗಾರ್ ಬಂಟ್ವಾಡಿ.

ಸ್ವತಂತ್ರ ಭಾರತದ 2ನೇ ಪ್ರಧಾನಿ ದೇಶಾಭಿಮಾನದಿಂದ ತಲೆದೂಗುವ ನಾಯಕ ಲಾಲ್ ಬಹದ್ದೂರ್ ಶಾಸ್ತ್ರೀಜೀಯವರ ಹಾವ, ಭಾವ, ನಡೆ-ನುಡಿಯನ್ನು ನಾನಾ ಮೂಲಗಳಿಂದ ಗೃಹಿಸಿ ಶ್ರೀತಿನ್ ಕೇವಲ ಮೂರು ತಿಂಗಳಲ್ಲಿಯೇ ರಚಿಸಿರುವ ಆರು ಅಡಿ ಎತ್ತರದ ಕಂಚಿನ ಪ್ರತಿಮೆ ಕುಂದಾಪುರದಲ್ಲಿ ಕಂಗೊಳಿಸುತ್ತಿದೆ..

ಕುಂದಾಪುರ ತಾಲೂಕಿನ ಬಂಟ್ವಾಡಿ ವೆಂಕಟರಮಣ ಶೆಟ್ಟಿಗಾರ ಮತ್ತು ದೇವಕಿ ಇವರ ಪುತ್ರ ಶ್ರೀತಿನ್ ಅವರು ಹುಟ್ಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಪೂರೈಸಿ ಹಟ್ಟಿಯಂಗಡಿಯ ನಮ್ಮ ಭೂಮಿ ಸಂಸ್ಥೆಯಲ್ಲಿ ಜನಾರ್ದನ್ ಹಾವಂಜೆ, ಮತ್ತು ಪುರುಷೋತ್ತಮ್ ಅಡ್ವೆಯವರ ಶಿಷ್ಯನಾಗಿ ಚಿತ್ರಕಲೆಯಲ್ಲಿ ಪ್ರಾಥಮಿಕ ಹಂತದ ತರಬೇತಿ ಪಡೆದು, ನಂತರ ಕಾರ್ಕಳದಲ್ಲಿ ಕಲ್ಲು ಮತ್ತು ಮರದ  ಸಾಂಪ್ರದಾಯಿಕ ಶಿಲ್ಪಕಲಾ ತರಬೇತಿ ಪಡೆದಿರುತ್ತಾರೆ. ಹಾಗೆಯೇ ಉನ್ನತ ಶಿಕ್ಷಣಕ್ಕಾಗಿ ಮೈಸೂರಿನ ಕಾವಾ ಕಾಲೇಜಿನಲ್ಲಿ ಐದು ವರ್ಷಗಳ ಬ್ಯಾಚುಲರ್  ಆಪ್ ಪೈನ್ ಆರ್ಟ್ ನಲ್ಲಿ ಶಿಲ್ಪಕಲೆಯ ತರಬೇತಿ ಪಡೆದಿರುತ್ತಾರೆ. ಇಲ್ಲಿ ಮುಖ್ಯವಾಗಿ ನೈಜ ಶಿಲ್ಪ ಕಲೆ ಮತ್ತು ಸಮಕಾಲಿನ ಶಿಲ್ಪಕಲೆಯ ತರಬೇತಿ ಪಡೆದರು.


ಕಾಲೇಜು ಶಿಕ್ಷಣದ  ನಂತರದ ದಿನಗಳಲ್ಲಿ  ಶಿಲ್ಪಕಲಾ ಶಿಬಿರ, ಶಿಲ್ಪಕಲಾ ಕಾರ್ಯಗಾರ, ಹಾಗೂ ಹಿರಿಯ ಶಿಲ್ಪ  ಕಲಾವಿದರೊಂದಿಗೆ ಜೊತೆಗೂಡಿ ಕೆಲಸ ಮಾಡಿರುವ ಅನುಭವದಿಂದ ಸಾಕಷ್ಟು ಶಿಲ್ಪ ಕೃತಿಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ಮುಖ್ಯವಾಗಿ
ಮಾಷ೯ಲ್ ಕಾಯ೯ಪ್ಪ ಕಂಚಿನ ಪ್ರತಿಮೆ, ರಮಣ ಮಹರ್ಷಿಯ ಪಂಚಲೋಹ ವಿಗ್ರಹ, ಕಲ್ಲಿನ ಪತಂಜಲಿ ಮುನಿ , ಪೈಬರ್ ಗ್ಲಾಸ್ನ  ಶಿವಾಜಿ ಪ್ರತಿಮೆ, ಕುಳಿತಿರುವ ಹನುಮಂತ ವಿಗ್ರಹ, ಧ್ಯಾನದಲ್ಲಿರುವ  ಶಿವ, ದೇವಿ ಶಿಲ್ಪ,  ಆನೆ, ಹುಲಿ, ಸಿಂಹ, ಹಾಗೂ ಇತರ ಅನೇಕ ಶಿಲ್ಪ ಕೃತಿಗಳನ್ನು ರಚಿಸಿ ಎಲ್ಲರ ಮನಗೆದ್ದಿದ್ದರು.

ಹಾಗೆಯೇ ಶ್ರೀತಿನ್ ಪರಿಸರ ಪ್ರೇಮಿಯಾಗಿದ್ದು, ತನ್ನ ಕಾಯಕದಲ್ಲಿ ಬಿಡುವಿದ್ದಾಗ  ಕಾಡು.. ಮೇಡು.. ಸುತ್ತಾಟ, ಪ್ರಾಣಿ ಪಕ್ಷಿ ಗಳ ಚಲನ ವಲನಗಳ ಅಧ್ಯಯನ ಮತ್ತು ಛಾಯಾಚಿತ್ರ ತೆಗೆಯುವುದು, ಹಾವುಗಳ ಸಂರಕ್ಷಣೆ ಮತ್ತು ಅಧ್ಯಯನ, ಹಾಗೆಯೇ  ಗಿಡ ನೆಡುವ ಹವ್ಯಾಸ ಇವರದ್ದಾಗಿದೆ.

ಮುಂದಿನ ದಿನಗಳಲ್ಲಿ ಇವರ  ಸೃಜನಶೀಲ  ಶಿಲ್ಪಕಲೆಗೆ  ಶುಭಕೋರುತ್ತಾ ಇವರ  ಎಲ್ಲಾ ಕನಸುಗಳು ನನಸಾಗಲಿ ಎಂಬುವುದೇ ನಮ್ಮೆಲ್ಲರ ಹಾರೈಕೆ

ಇಂದು ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಶಿಲ್ಪಕಲೆಗಾರ ಶ್ರೀತಿನ್ ಶೆಟ್ಟಿಗಾರ ಬಂಟ್ವಾಡಿ ಇವರಿಂದ ನೂತನವಾಗಿ ಪರಿಷ್ಕೃತಗೊಂಡ ಶಾಸ್ತ್ರೀಜಿಯವರ ಕಂಚಿನ ಪ್ರತಿಮೆಯನ್ನು ಪುರಸಭೆಯ ಅಧ್ಯಕ್ಷೆ ಶ್ರೀಮತಿ ವೀಣಾ ಭಾಸ್ಕರ್ ಉದ್ಘಾಟಿಸಿದರು. ಇದೇ ಸಂದಭ೯ದಲ್ಲಿ ಶಿಲ್ಪ ಕಲೆಗಾರ ಶ್ರೀತಿನ್ ಅವರನ್ನು ಸನ್ಮಾನಿಸಲಾಯಿತು.

ಸಂದಶಿ೯ತ ವರದಿ : ಸುಧಾಕರ ವಕ್ವಾಡಿ

Back to top button