“ನಮ್ಮ ಖಾಸಗಿ ಮಾಹಿತಿ ನಿಮಗೆ ಏಕೆ” ಎಂದು ಸಮೀಕ್ಷೆಗೆ ಬಂದ ಶಿಕ್ಷಕಿಯನ್ನು ಕೂಡಿ ಹಾಕಿದರು!

Views: 90
ಕನ್ನಡ ಕರಾವಳಿ ಸುದ್ದಿ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ)ಗೆ ತೆರಳಿದ್ದ ಶಿಕ್ಷಕಿಯನ್ನು ಮನೆಯಲ್ಲಿ ಕೂಡಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೃತ್ಯ ಎಸಗಿದ ಭದ್ರಪ್ಪ ಲೇಔಟ್ ನಿವಾಸಿ ಸಂದೀಪ್ (27) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
ಕೋತಿಹೊಸಹಳ್ಳಿ ಸರಕಾರಿ ಶಾಲೆಯ ಶಿಕ್ಷಕಿ ಸುಶೀಲಮ್ಮ ಬುಧವಾರ ಭದ್ರಪ್ಪ ಲೇಔಟ್ನಲ್ಲಿ ಸಮೀಕ್ಷೆ ನಡೆಸುತ್ತಿದ್ದರು. ಈ ವೇಳೆ ಸಂದೀಪ್ ಅವರ ತಾಯಿ ಬಳಿ ಆಧಾರ್ ಕಾರ್ಡ್, ವೃತ್ತಿ ಸೇರಿದಂತೆ ಇನ್ನಿತರ ಮಾಹಿತಿ ಪಡೆದಿದ್ದರು. ಈ ವೇಳೆ ಸಂದೀಪ್ ಮನೆಯಲ್ಲಿರಲಿಲ್ಲ.ಕೆಲ ಸಮಯದ ಬಳಿಕ ತಮ್ಮ ಮನೆಯಲ್ಲಿ ಸಮೀಕ್ಷೆ ನಡೆಯುತ್ತಿದೆ ಎಂದು ಮಾಹಿತಿ ತಿಳಿದ ಸಂದೀಪ್ ತನ್ನದೇ ಟೀ ಶಾಪ್ನಿಂದ ಮನೆ ಬಳಿ ತೆರಳಿದ್ದ. ಶಿಕ್ಷಕಿ ಸುಶೀಲಮ್ಮ ಅವರನ್ನು ಉದ್ದೇಶಿಸಿ, “ನಿಮಗೆ ಏಕೆ ಮಾಹಿತಿ ಕೊಡಬೇಕು, ನಮ್ಮ ಖಾಸಗಿ ಮಾಹಿತಿ ನಿಮಗೆ ಏಕೆ?” ಎಂಬುದೂ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿ ಉದ್ಧಟತನ ಮೆರೆದು ಧಮ್ಮಿ ಹಾಕಿದ್ದ. ಅಷ್ಟೇ ಅಲ್ಲದೆ, ಮನೆಯ ಕಾಂಪೌಂಡ್ಗೆ ಬೀಗ ಹಾಕಿ ಶಿಕ್ಷಕಿಯನ್ನು ಕೂಡಿ ಹಾಕಿದ್ದ. ಸ್ಥಳಕ್ಕೆ ಧಾವಿಸಿದ ಹೊಯ್ಸಳ ಪೊಲೀಸರು ಸುಶೀಲಮ್ಮ ಅವರನ್ನು ರಕ್ಷಿಸಿ, ಸಂದೀಪ್ನನ್ನು ವಶಕ್ಕೆ ಪಡೆದಿದ್ದರು.