ದೀಪಾವಳಿ ಅಂಗವಾಗಿ ಸ್ಪರ್ಧೆ: ಹಿಂದಿನಿಂದ ಹೋರಿ ತಿವಿದು ವ್ಯಕ್ತಿ ಸಾವು, ಇಬ್ಬರು ಗಂಭೀರ
Views: 39
ಕನ್ನಡ ಕರಾವಳಿ ಸುದ್ದಿ: ಹೋರಿ ತಿವಿದು ಓರ್ವ ವಯೋವೃದ್ಧ ವ್ಯಕ್ತಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆಯಿತು. ಮೃತರನ್ನು 70 ವರ್ಷದ ಚಂದ್ರಶೇಖರ್ ಕೊಡಿಹಳ್ಳಿ ಎಂದು ಗುರುತಿಸಲಾಗಿದೆ.
ಚಂದ್ರಶೇಖರ ಕೋಡಹಳ್ಳಿ ಅವರು ಹಾವೇರಿಯ ದಾನೇಶ್ವರಿನಗರದ ನಿವಾಸಿ. ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡಿ ವಾಪಸ್ ಮನೆಗೆ ಹೋಗುತ್ತಿದ್ದ ವೇಳೆ, ಹಿಂದಿನಿಂದ ಹೋರಿ ತಿವಿದು ಘಟನೆ ನಡೆದಿದೆ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ದೀಪಾವಳಿ ಅಂಗವಾಗಿ ದನ ಬೆದರಿಸುವ ಸ್ಪರ್ಧೆ:ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದ ರಥೋತ್ಸವ ಪ್ರತಿವರ್ಷ ದೀಪಾವಳಿಯಂದು ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಜಾತ್ರಾ ಸಮಿತಿ ಬಲಿಪಾಡ್ಯಮಿಯಂದು ದನ ಬೆದರಿಸುವ ಸ್ಪರ್ಧೆಯನ್ನು ಆಯೋಜಿಸುತ್ತದೆ. ಈ ಸ್ಪರ್ಧೆಯಲ್ಲಿ ಯಾವುದೇ ಬಹುಮಾನ ಇರುವುದಿಲ್ಲ. ಸ್ಪರ್ಧೆ ನಡೆದ ನಂತರ ಬೇರೆ ಕಡೆ ಸ್ಪರ್ಧೆಗಳಲ್ಲಿ ಹೋರಿಗಳಿಗೆ ಬಹುಮಾನ ನೀಡಲಾಗುತ್ತದೆ. ಈ ವರ್ಷದ ಸ್ಪರ್ಧೆ ಇಂದು (ಬುಧವಾರ) ಮಧ್ಯಾಹ್ನ ನಡೆಯಿತು. ಹಾವೇರಿ ನಗರ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ರೈತರು ತಮ್ಮ ನೆಚ್ಚಿನ ಹೋರಿಗಳನ್ನು ಸ್ಪರ್ಧೆಗೆ ಕರೆತಂದಿದ್ದರು. ಸ್ಪರ್ಧೆಯಲ್ಲಿ ಸುಮಾರು 300ಕ್ಕೂ ಅಧಿಕ ಕೊಬ್ಬರಿ ಹೋರಿಗಳು ಭಾಗಿಯಾಗಿದ್ದವು.






