ತಿಮರೋಡಿಯನ್ನು ನಮ್ಮೂರಿನ ಬದಲು ಕಾಡಿಗೆ ಕಳುಹಿಸಿ ರಾಯಚೂರಿನಲ್ಲಿ ಪ್ರತಿಭಟನೆ
Views: 176
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ, ಬುರುಡೆ ಕೇಸ್ ಷಡ್ಯಂತ್ರದ ಹಿಂದೆ ಕಾಣಿಸಿಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡಲಾಗಿದ್ದು, ಅದರ ಬೆನ್ನಲ್ಲೇ ತಿಮರೋಡಿ ನಾಪತ್ತೆಯಾಗಿದ್ದಾರೆ. ನೋಟೀಸ್ ಸರ್ವ್ ಮಾಡಲು ಹೋದ ಪೊಲೀಸರಿಗೆ ತಿಮರೋಡಿ ಸಿಕ್ಕಿಲ್ಲ. ಈ ನಡುವೆ, ʼನಮ್ಮೂರಿಗೆ ತಿಮರೋಡಿ ಬೇಡʼ ಎಂದು ರಾಯಚೂರಿನ ಜನ ಪ್ರತಿಭಟನೆಗೆ ಇಳಿದಿದ್ದಾರೆ.
ಮಹೇಶ್ ಶೆಟ್ಟೆ ತಿಮರೋಡಿಯನ್ನು ರಾಯಚೂರಿಗೆ ಗಡಿಪಾರು ಮಾಡಿದ ಹಿನ್ನೆಲೆ ಮಾನ್ವಿ ತಾಲೂಕಿನಲ್ಲಿ ವಿರೋಧ ವ್ಯಕ್ತವಾಗಿದೆ. ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ದಲಿತಪರ ಸಂಘಟನೆ ಹಾಗೂ ಸಮಾನ ಮನಸ್ಕರ ವೇದಿಕೆ ವತಿಯಿಂದ ಪ್ರತಿಭಟನೆ ನಡೆದಿದೆ. ಮಾನ್ವಿ ತಾಲೂಕಿಗೆ ಗಡಿಪಾರು ಆದೇಶ ರದ್ದುಪಡಿಸುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ. ʼನಮ್ಮ ರಾಯಚೂರಿನ ಪಕ್ಕದಲ್ಲೇ ರಾಘವೇಂದ್ರ ಸ್ವಾಮಿಗಳ ದೇಗುಲವಿದೆ. ಅಲ್ಲದೇ ನಮ್ಮ ಜಿಲ್ಲೆಯಲ್ಲಿ ಧರ್ಮಸ್ಥಳದ ಅಪಾರ ಭಕ್ತರಿದ್ದಾರೆ. ಹೀಗಾಗಿ ತಿಮರೋಡಿಯನ್ನು ನಮ್ಮೂರಿನ ಬದಲು ಕಾಡಿಗೆ ಕಳುಹಿಸಿʼ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. ಗೂಂಡಾಗಳಿಗೆ ರಾಯಚೂರು ಜಿಲ್ಲೆಯಲ್ಲಿ ಜಾಗವಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ. ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
32 ಕ್ರಿಮಿನಲ್ ಕೇಸ್ಗಳು, ಜೊತೆಗೆ ಕೀಳು ಮಟ್ಟದ ಪದಗಳ ಬಳಕೆ ತಿಮರೋಡಿಗೆ ಮುಳುವಾಗಿವೆ. ತಿಮರೋಡಿ ಕೇಸ್ ಹಿಸ್ಟರಿ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚಿಸಿದ್ದಾರೆ.






