ಕರಾವಳಿಯಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪ, ಕಲುಷಿತ ನೀರಿನ ಸೇವನೆ: ಫುಡ್ ಪಾಯಿಸನ್, ವಿವಿಧ ಆಸ್ಪತ್ರೆಗಳಲ್ಲಿ ಪ್ರಕರಣ ದಾಖಲು

Views: 62
ಮಂಗಳೂರು, ನಗರ ಮತ್ತು ಇತರ ಪ್ರದೇಶಗಳಲ್ಲಿ ಕಲುಷಿತ ನೀರಿನ ಸೇವನೆಯಿಂದಾಗಿ ವಿಷಾಹಾರ ಅಥವಾ ಫುಡ್ ಪಾಯಿಸನ್ ಪ್ರಕರಣಗಳು ಹೆಚ್ಚಾಗತೊಡಗಿವೆ.
ವಿಪರೀತ ತಾಪಮಾನ ಹೆಚ್ಚುತ್ತಿರುವ ನೀರಿನ ಬಿಕ್ಕಟ್ಟು ಇತ್ಯಾದಿ ಕಾರಣಗಳಿಂದಾಗಿ ಮಂಗಳೂರಿನ ಮತ್ತು ಕರಾವಳಿ ಭಾಗದ ಇತರ ಬಹುತೇಕ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಫುಡ್ ಪಾಯಿಸನ್ ಹಲವು ಪ್ರಕರಣಗಳು ದೃಢಪಡುತ್ತಿವೆ. ದಿನಕ್ಕೆ ಐದಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಹೆಚ್ಚುತ್ತಿರುವ ಬಿಸಿಲಿನ ತಾಪ ಮತ್ತು ನೀರಿನ ಗುಣಮಟ್ಟದಲ್ಲಿನ ಬದಲಾವಣೆಗಳು ಈ ಸಮಸ್ಯೆಗೆ ಕಾರಣವಾಗಿರಬಹುದು ಎಂದು ಆರೋಗ್ಯ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಕ್ಕಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 100 ಮಂದಿ ಫುಡ್ ಪಾಯಿಸನ್ ಅಥವಾ ವಿಷಾಹಾರ ಸಮಸ್ಯೆಯಿಂದ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿರುವುದಾಗಿ ವರದಿಯಾಗಿದೆ.
ಕಲುಷಿತ ನೀರು ಸೇವನೆ ಮುಖ್ಯ ಕಾರಣವಾಗುತ್ತದೆ. ಇಷ್ಟೇ ಅಲ್ಲದೆ, ಆಹಾರದಲ್ಲಿರುವ ಕಲ್ಮಶಗಳು, ಆಹಾರದಲ್ಲಿನ ಬ್ಯಾಕ್ಟೀರಿಯಾ ಮತ್ತು ವೈರಸ್ಗಳು, ಅವಧಿ ಮೀರಿದ ಅಥವಾ ಬೇಯಿಸದ ಆಹಾರದ ಬಳಕೆ, ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ದೀರ್ಘಾವಧಿಯ ಆಹಾರ ಸಂಗ್ರಹಣೆ, ಹಾಳಾದ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಮತ್ತು ಹೆಚ್ಚು ಸಂಸ್ಕರಿಸಿದ ಆಹಾರಗಳ ಸೇವನೆಯೂ ವಿಷಾಹಾರಕ್ಕೆ ಕಾರಣವಾಗತ್ತವೆ. ಮನೆಯಲ್ಲಿ ಚೆನ್ನಾಗಿ ಬೇಯಿಸಿದ ಆಹಾರವನ್ನು ಸೇವಿಸುವುದರಿಂದ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ.
ಫುಡ್ ಪಾಯಿಸನ್ ಲಕ್ಷಣಗಳು
ಜ್ವರ, ವಾಂತಿ, ಅತಿಸಾರ, ತಲೆನೋವು ಮತ್ತು ಹೊಟ್ಟೆ ನೋವು, ಕೆಲವೊಮ್ಮೆ ಚರ್ಮದ ದದ್ದುಗಳು ಮತ್ತು ತುರಿಕೆಗಳು ಫುಡ್ ಪಾಯಿಸನ್ನ ಪ್ರಮುಖ ಲಕ್ಷಣಗಳಾಗಿವೆ. ಅಂತಹ ಸಂದರ್ಭಗಳಲ್ಲಿ ತಕ್ಷಣದ ವೈದ್ಯಕೀಯ ಚಿಕಿತ್ಸೆ ಅಗತ್ಯ.
ಕೆಲವು ಮನೆಮದ್ದುಗಳು ಫುಡ್ ಪಾಯಿಸನ್ ಲಕ್ಷಣಗಳನ್ನು ಸ್ವಲ್ಪ ಮಟ್ಟಿಗೆ ನಿವಾರಿಸಬಹುದಾದರೂ, ಯಾವುದೇ ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಜೀರಿಗೆಯನ್ನು ಜಗಿಯುವುದು ಅಥವಾ ಜೀರಿಗೆ ಪುಡಿಯನ್ನು ಸೇವಿಸುವುದರಿಂದ ರೋಗಲಕ್ಷಣಗಳನ್ನು ನಿವಾರಿಸಲು ಪ್ರಯೋಜನವಾಗಬಹುದು. ಜೇನುತುಪ್ಪವನ್ನು ಸೇವಿಸುದರಿಂದ ವಿಷಾಹಾರದ ತೀವ್ರತೆಯನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.