ಇಂದು ಉಡುಪಿ, ಬ್ರಹ್ಮಾವರ, ಕಾಪುಗೆ ದಿಢೀರ್ ಲೋಕಾಯುಕ್ತ ದಾಳಿ!

Views: 235
ಕನ್ನಡ ಕರಾವಳಿ ಸುದ್ದಿ: ಇಂದು ಬೆಳ್ಳಂಬೆಳಗ್ಗೆ ಉಡುಪಿಯ ಹಲವು ಕಡೆಗಳಿಗೆ ಲೋಕಾಯುಕ್ತ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಇತ್ತೀಚೆಗೆ ಬೆಂಕಿ ದುರಂತ ಸಂಭವಿಸಿದ ಬ್ರಹ್ಮಾವರದಲ್ಲಿರುವ ವಾರಂಬಳ್ಳಿ ಗ್ರಾಮ ಪಂಚಾಯತ್ ಗೆ ಸಂಬಂಧಪಟ್ಟ ತ್ಯಾಜ್ಯ ವಿಲೇವಾರಿ ಘಟಕಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಇಲ್ಲಿ ಸುಟ್ಟುಹೋದ ವಸ್ತುಗಳನ್ನು ಇನ್ನೂ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ ಪ್ರಕರಣ ದಾಖಲಿಸಲು ಲೋಕಾಯುಕ್ತ ಪೊಲೀಸರಿಗೆ ಅವರು ಸೂಚನೆ ನೀಡಿದರು.
ಬಳಿಕ ಆದಿ ಉಡುಪಿ ಎಪಿಎಂಸಿಗೆ ದಾಳಿ ನಡೆಸಿದ ಉಪ ಲೋಕಾಯುಕ್ತರು ಅಲ್ಲಿನ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯಗಳನ್ನು ಪರಿಶೀಲಿಸಿದರು. ನೀರಿನ ವ್ಯವಸ್ಥೆ ಇಲ್ಲದಿರುವ ಹಾಗೂ ಶೌಚಾಲಯದಲ್ಲಿ ನೈರ್ಮಲ್ಯ ಕಾಪಾಡದ ಬಗ್ಗೆ ಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧವು ಪ್ರಕರಣ ದಾಖಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಅವರು ನಿರ್ದೇಶನ ನೀಡಿದರು.
ಕಾಪು ಪುರಸಭೆಯ ಡಂಪಿಂಗ್ ಯಾರ್ಡಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ಈ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ಸ್ಥಳದಲ್ಲಿರದ ಬಗ್ಗೆ ಉಪ ಲೋಕಾಯುಕ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಕಾನೂನು ಕ್ರಮದ ಎಚ್ಚರಿಕೆಯನ್ನು ಅವರು ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಮಂಗಳೂರು ಪ್ರಭಾರ ಎಸ್ಪಿ ಕುಮಾರಚಂದ್ರ, ಡಿ ವೈ ಎಸ್ ಪಿ ಡಾ.ಗಾನಾ ಪಿ.ಕುಮಾರ್, ಮಂಜುನಾಥ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.