ಅನ್ಯ ಜಾತಿ ಎಂದು ಪ್ರೀತಿಗೆ ಪೋಷಕರ ವಿರೋಧ:ದುರಂತ ಅಂತ್ಯ ಕಂಡ ಪ್ರೇಮಿಗಳು
Views: 106
ಕನ್ನಡ ಕರಾವಳಿ ಸುದ್ದಿ: ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದಕ್ಕೆ ಪ್ರೇಮಿಗಳು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಈ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿ ರೈಲ್ವೇ ನಿಲ್ದಾಣ ಬಳಿ ನಡೆದಿದೆ.
ಇಂದು ಬೆಳಿಗ್ಗೆ ಬೆಂಗಳೂರಿಗೆ ತೆರಳುವ ರೈಲಿಗೆ ಸಿಲುಕಿ ಪ್ರೇಮಿಗಳಿಬ್ಬರು ಜೀವ ಕಳೆದುಕೊಂಡಿದ್ದಾರೆ.
ಮಾಲೂರು ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ 18 ವರ್ಷದ ಸತೀಶ್ ಎಂಬಾತ ಹಾಗೂ ಮಾಲೂರು ತಾಲೂಕಿನ ಪನಮಾಕನಹಳ್ಳಿ ಗ್ರಾಮದ 17 ವರ್ಷದ ಶ್ವೇತಾ ಎಂಬಾಕೆ ಮೃತಪಟ್ಟಿದ್ದಾರೆ. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮುಂಬರುವ ದಿನಗಳಲ್ಲಿ ಮದುವೆಯಾಗಬೇಕು ಎಂದು ಅಂದುಕೊಂಡಿದ್ದರು. ಆದರೆ ಅನ್ಯ ಜಾತಿ ಎಂದು ಈ ಇಬ್ಬರ ಪ್ರೀತಿಗೆ ಪೋಷಕರ ವಿರೋಧ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ ಸತೀಶ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಆದರೆ ತಮ್ಮ ಪ್ರೀತಿಗೆ ಪೋಷಕರ ವಿರೋಧ ವ್ಯಕ್ತಪಡಿಸಿದಕ್ಕೆ ಮನನೊಂದು ಬೆಂಗಳೂರಿಗೆ ತೆರಳುವ ರೈಲಿಗೆ ಸಿಲುಕಿ ಸತೀಶ್ ಹಾಗೂ ಶ್ವೇತಾ ದುರಂತ ಅಂತ್ಯ ಕಂಡಿದ್ದಾರೆ. ಸ್ಥಳಕ್ಕೆ ಬೆಂಗಳೂರಿನ ರೈಲ್ವೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.






