ಅತ್ತೆಗೆ ವಿಷಪ್ರಾಶನ ಮಾಡಿ ನಗದು-ಚಿನ್ನದೊಂದಿಗೆ ಪರಾರಿಯಾದ ನವವಧು!
Views: 42
ಕನ್ನಡ ಕರಾವಳಿ ಸುದ್ದಿ: ಮದುವೆಯಾದ ಕೇವಲ ಒಂದು ತಿಂಗಳಲ್ಲೇ ನವವಧುವೊಬ್ಬಳು ತನ್ನ ಅತ್ತೆಗೆ ವಿಷಪ್ರಾಶನ ಮಾಡಿ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದಿನೊಂದಿಗೆ ಪರಾರಿಯಾದ ಆಘಾತಕಾರಿ ಘಟನೆ ರಾಜಸ್ಥಾನದ ಅಲ್ವಾರ್ನಲ್ಲಿ ನಡೆದಿದೆ.
ವಿಕ್ರಮಜೀತ್ ಎಂಬುವವರು ರೇಖಾ ಎಂಬಾಕೆಯನ್ನು ಕಳೆದ ಮೇ ತಿಂಗಳಲ್ಲಿ ವಿವಾಹವಾಗಿದ್ದರು. ರೇಖಾಗೆ ಈ ಮೊದಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ತನ್ನ ಮೊದಲ ಪತಿಯಿಂದ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ ಎಂದು ನಂಬಿಸಿದ್ದ ಈಕೆ, ಗುರುದ್ವಾರದಲ್ಲಿ ವಿಕ್ರಮಜೀತ್ ಅವರನ್ನು ವರಿಸಿದ್ದಳು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಈಕೆಯ ಅಸಲಿ ರೂಪ ಹೊರಬಂದಿದೆ.
ಸಂಚು ರೂಪಿಸಿದ ನವವಧು
ಸಂಚು ರೂಪಿಸಿದ್ದ ರೇಖಾ, ಮನೆಯಲ್ಲಿದ್ದ ತನ್ನ ಅತ್ತೆಗೆ ಫಿನೈಲ್ ಬೆರೆಸಿದ ಖಿಚಡಿಯನ್ನು ತಿನ್ನಿಸಿದ್ದಾಳೆ. ಅತ್ತೆಯ ಆರೋಗ್ಯ ತೀವ್ರವಾಗಿ ಹದಗೆಟ್ಟು, ಇಡೀ ಕುಟುಂಬ ಆಸ್ಪತ್ರೆಗೆ ಧಾವಿಸಿದ ಸಮಯವನ್ನು ಬಳಸಿಕೊಂಡ ಕಿಲಾಡಿ ಸೊಸೆ, ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ 30,000 ರೂ. ನಗದನ್ನು ದೋಚಿ ಪರಾರಿಯಾಗಿದ್ದಾಳೆ.
ಇನ್ನೂ ಆಘಾತಕಾರಿ ವಿಷಯವೆಂದರೆ, ಈ ಬಗ್ಗೆ ವಿಕ್ರಮಜೀತ್ ಕುಟುಂಬದವರು ರೇಖಾಳ ಸಂಬಂಧಿಕರನ್ನು ವಿಚಾರಿಸಿದಾಗ, “ಇದೇ ನಮ್ಮ ಬ್ಯುಸಿನೆಸ್, ನೀವು ಏನೂ ಮಾಡಲು ಸಾಧ್ಯವಿಲ್ಲ” ಎಂದು ಉದ್ಧಟತನದ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೆ, ವಾಪಸ್ 3 ಲಕ್ಷ ರೂ. ನೀಡದಿದ್ದರೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ವಿಕ್ರಮಜೀತ್ ಆರೋಪಿಸಿದ್ದಾರೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಕಿಲಾಡಿ ವಧುವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ,






