ನಿಂತಿದ್ದ ಲಾರಿಗೆ ಕಾರು ಢಿಕ್ಕಿ – ಓರ್ವ ಸಾವು, ಇಬ್ಬರು ಗಂಭೀರ

Views: 0
ಮಂಗಳೂರು: ರಸ್ತೆ ಬದಿ ನಿಂತಿದ್ದ ಟಿಪ್ಪರ್ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟು, ಕಾರಿನಲ್ಲಿದ್ದ ಇತರ ಇಬ್ಬರು ಸಹ ಪ್ರಯಾಣಿಕರು ತೀವ್ರ ಗಾಯಗೊಂಡ ಘಟನೆ ಸುರತ್ಕಲ್ ಹೊಸ ಬೆಟ್ಟು ಬಳಿ ಇಂದು ನಡೆದಿದೆ.
ಕಾರು ಚಾಲಕ ಅರ್ಜುನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸಹ ಪ್ರಯಾಣಿಕ ಮೊಹಮ್ಮದ್ ಫಿಝಾನ್ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಸಹ ಪ್ರಯಾಣಿಕ ಅನಿರುದ್ಧ್ ನಾಯರ್ ಅವರಿಗೆ ಗಾಯವಾಗಿದೆ.
ತಮಿಳುನಾಡಿನ ರಿಜಿಸ್ಟ್ರೇಶನ್ ನಂಬರ್ ಹೊಂದಿರುವ ಫೋರ್ಚುನರ್ ಕಾರನ್ನು ಅರ್ಜುನ್ ಅವರು ಚಲಾಯಿಸಿಕೊಂಡು ಮಂಗಳೂರಿನಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದಾಗ ಮುಂಜಾನೆ ವೇಳೆಗೆ ಸುರತ್ಕಲ್ ಸಮೀಪದ ಹೊಸಬೆಟ್ಟು ಪೆಟ್ರೋಲ್ ಪಂಪ್ ಎದುರು ರಸ್ತೆ ಬದಿ ನಿಲ್ಲಿಸಿದ್ದ ಐಶರ್ ಟಿಪ್ಪರ್ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಚಾಲಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ.
ಕಾರು ಚಾಲಕನ ಅತಿ ವೇಗದ ಹಾಗೂ ನಿರ್ಲಕ್ಷ್ಯದ ಚಾಲನೆ ಈ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.