CAA: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ ಕೇಂದ್ರ ಸರ್ಕಾರ

Views: 46
ನವದೆಹಲಿ: ಬಹುವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಇಡೀ ದೇಶಾದ್ಯಂತ ಜಾರಿಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರೋ ಹೊತ್ತಲ್ಲೇ ಈ ಕಾಯ್ದೆ ಜಾರಿ ಮಾಡಿದ್ದು, ಎಲೆಕ್ಷನ್ ಗೆಲ್ಲಲು ಬಿಜೆಪಿಗೆ ಇದೊಂದು ಅಸ್ತ್ರವಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯಡಿ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಸೇರಿ ವಿದೇಶದಿಂದ ಭಾರತಕ್ಕೆ ವಲಸೆ ಬಂದವರಿಗೆ ಪೌರತ್ವ ನೀಡಲಾಗುತ್ತದೆ. ಮುಸ್ಲಿಮರನ್ನು ಹೊರತುಪಡಿಸಿ ಬೇರೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ಹಿಂದೂ, ಕ್ರೈಸ್ತ, ಸಿಖ್ಖ್, ಬೌದ್ಧ, ಪಾರ್ಸಿ ಸಮುದಾಯಗಳಿಗೆ ಭಾರತದ ಪೌರತ್ವ ನೀಡಲಾಗುವುದು. ಈಗಾಗಲೇ ಲೋಕಸಭೆ, ರಾಜ್ಯಸಭೆಯಲ್ಲಿ ಸಿಎಎ ಕಾಯ್ದೆ ಅಂಗೀಕಾರವಾಗಿದೆ.
2014ರ ಡಿಸೆಂಬರ್ 30ಕ್ಕೂ ಮುಂಚಿತವಾಗಿ ಭಾರತಕ್ಕೆ ವಲಸೆ ಬಂದವರಿಗೆ ಭಾರತದ ಪೌರತ್ವ ನೀಡಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಇಂದಿನಿಂದಲೇ ಹೊಸ ನಿಯಮ ರೂಪಿಸಿ ಜಾರಿಗೆ ಅಧಿಸೂಚನೆ ಹೊರಡಿಸಿದೆ. ಈ ಸಿಎಎ ಜಾರಿಯಿಂದ ಭಾರತದ ಯಾವುದೇ ನಾಗರಿಕರ ಪೌರತ್ವಕ್ಕೆ ತೊಂದರೆ ಆಗುವುದಿಲ್ಲ.
ಭಾರತದ ಪೌರತ್ವ ಪಡೆಯಲು ಏನು ಮಾಡಬೇಕು?
ಭಾರತಕ್ಕೆ ವಲಸೆ ಬಂದವರು ಈ ದೇಶದ ಪೌರತ್ವ ಪಡೆಯಲು ಆನ್ಲೈನ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬೇಕು. ಈಗ ಆನ್ಲೈನ್ ಪೋರ್ಟಲ್ ರಚನೆಯಾಗಿದೆ. ಇನ್ನೂ ಈ ಪೋರ್ಟಲ್ ಬಗ್ಗೆ ಅಧಿಕೃತವಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಇಲಾಖೆ ಘೋಷಣೆ ಹೊರಡಿಸಲಿದೆ.