ಕೋಟೇಶ್ವರ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ಸಭೆ, ವಿದ್ಯಾರ್ಥಿಗಳ ದೈನಂದಿನ ಚಟುವಟಿಕೆಗಳ ಬಗ್ಗೆ ನಿಗಾವಹಿಸಿ: ರಾಮರಾಯ ಆಚಾರ್ಯ

Views: 21
ಕನ್ನಡ ಕರಾವಳಿ ಸುದ್ದಿ: ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ- ಕೋಟೇಶ್ವರ ಇಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು.
ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯರವರು ಪೋಷಕರನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳ ಜ್ಞಾನಾರ್ಜನೆಯ ಮತ್ತು ಬದುಕು ರೂಪಿಸಿಕೊಳ್ಳುವ ಸಂದರ್ಭದಲ್ಲಿ ಪೋಷಕರು ಅತ್ಯಂತ ಗರಿಷ್ಠ ಮಟ್ಟದ ಜಾಗೃತೆಯನ್ನು ವಹಿಸಿ ಕಾಲ ಮಿಂಚುವ ಮೊದಲು ಎಚ್ಚೆತ್ತುಕೊಳ್ಳಬೇಕೆಂದು ಪೋಷಕರಿಗೆ ಹಿತವಚನಗಳನ್ನಾಡಿದರು.
ವಿದ್ಯಾರ್ಥಿಗಳ ವಯಸ್ಸೇ ಅವರನ್ನು ಅನುಪಯುಕ್ತ ಆಲೋಚನೆಗಳೆಡೆಗೆ ಆಕರ್ಷಿಸುವ ಈ ಕಾಲಘಟ್ಟದಲ್ಲಿ ಅವರ ಸರ್ವತೋಮುಖ ಅಭಿವೃದ್ಧಿಯಲ್ಲಿ ಪೋಷಕರಾಗಿ ಗಮನಿಸದೇ ಇದ್ದ ಪಕ್ಷದಲ್ಲಿ ಅವನತಿಗೆ ಅದು ಮುನ್ನುಡಿ ಇಟ್ಟಂತಾಗುತ್ತದೆ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು.
ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಪೋಷಕ ಪ್ರತಿನಿಧಿಗಳಾಗಿ ರಾಜೇಶ್ ಮಾರ್ಕೋಡು, ರಾಮ ಶೆಟ್ಟಿಗಾರ, ಕೃಪಾ ಹೆಬ್ಬಾರ್, ಎಸ್.ವಿ. ನಾಗರಾಜ, ಶೃಂಗಾರಿ ಎಸ್.ಶೆಟ್ಟಿ, ಮಂಜುನಾಥ ಪೂಜಾರಿ ಹಾಗೂ ಕಮಲ ಕಟ್ಕೆರೆಯವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಪ್ರಭಾಕರ ಖಾರ್ವಿ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ನಾಗರಾಜ ಯು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ನಾಗರಾಜ ವೈದ್ಯ ಎಂ., ಹಾಜರಾತಿ ಸಮಿತಿ ಸಂಚಾಲಕರಾದ ಚೇತನಾ ಎಂ. ಉಪಸ್ಥಿತರಿದ್ದರು.
ರಕ್ಷಕ-ಶಿಕ್ಷಕ ಸಂಘದ ಸಂಚಾಲಕರಾದ ಡಾ. ಶೇಖರ ಬಿ. ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಮೃತಾ ಅಂತಿಮ ಬಿ.ಕಾಂ. ವಂದಿಸಿದರು. ದಿವ್ಯಶ್ರೀ ಅಂತಿಮ ಬಿ.ಕಾಂ. ಕಾರ್ಯಕ್ರಮವನ್ನು ನಿರ್ವಹಿಸಿದರು.