ಧಾರ್ಮಿಕ

ಕಾಪು ಹಿಂದೂ-ಮುಸ್ಲಿಂ ಭಾವೈಕ್ಯದ ಕೇಂದ್ರ  ಸಯ್ಯದ್‌ ಅರಬೀ ವಲಿಯುಲ್ಲಾಹಿ ದರ್ಗಾ

Views: 0

ಕಾಪು ಕೈಪುಂಜಾಲು ಕಡಲ ತಡಿಯಲ್ಲಿ ಹಿಂದೂಗಳ ಜಮೀನಿನಲ್ಲಿರುವ ದರ್ಗಾವೊಂದು ಹಿಂದೂ ಮತ್ತು ಮುಸ್ಲಿಂ ಧರ್ಮೀಯರ ನಂಬಿಕೆ ಮತ್ತು ಭಕ್ತಿಯ ಶ್ರದ್ಧಾಕೇಂದ್ರವಾಗಿದೆ.

ಮುಸ್ಲಿಮರಷ್ಟೇ ಹಿಂದೂಗಳೂ ಶ್ರದ್ಧೆ ಭಕ್ತಿ ಹೊಂದಿರುವ ಈ ದರ್ಗಾ ಕರಾವಳಿಯಲ್ಲಿ ಹಿಂದಿನಿಂದಲೂ ಇದ್ದ ಧಾರ್ಮಿಕ ಭಾವೈಕ್ಯಕ್ಕೆ ಸಾಕ್ಷಿಯಂತಿದೆ.

ಇಂದಿಗೂ ಸ್ಥಳೀಯ ಮೀನುಗಾರರು, ಹಿಂದೂಗಳು ಭಕ್ತಿಯಿಂದ ಹರಕೆ ಸಲ್ಲಿಸುತ್ತಾ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿಗೆ ಬಂದು ಪ್ರಾರ್ಥಿಸುತ್ತಾರೆ

ಕಾಪು ಕೈಪುಂಜಾಲು ಕಡಲ ತಡಿಯಲ್ಲಿ ಹಿಂದೂಗಳ ಜಮೀನಿನಲ್ಲಿರುವ ದರ್ಗಾವೊಂದು ಹಿಂದೂ ಮತ್ತು ಮುಸ್ಲಿಂ ಧರ್ಮೀಯರ ನಂಬಿಕೆ ಮತ್ತು ಭಕ್ತಿಯ ಶ್ರದ್ಧಾಕೇಂದ್ರವಾಗಿದ್ದು, ಭಾವೈಕ್ಯದ ಪ್ರತೀಕವಾಗಿ ಗಮನ ಸೆಳೆಯುತ್ತಿದೆ.

ಹಿಂದೂಗಳ ಜಾಗದಲ್ಲಿರುವ ಸಯ್ಯದ್‌ ಅರಬ್ಬಿ ವಲಿಯುಲ್ಲಾಹಿ ದರ್ಗಾದ ಸುತ್ತ ವಾಸಿಸುವವರೆಲ್ಲರೂ ಬಹುಸಂಖ್ಯಾತ ಹಿಂದೂ ಬಾಂಧವರು ಎಂಬುದು ಇಲ್ಲಿನ ವಿಶೇಷತೆ. ಮುಸ್ಲಿಮರಷ್ಟೇ ಹಿಂದೂಗಳೂ ಶ್ರದ್ಧೆ ಭಕ್ತಿ ಹೊಂದಿರುವ ಈ ದರ್ಗಾ ಕರಾವಳಿಯಲ್ಲಿ ಹಿಂದಿನಿಂದಲೂ ಇದ್ದ ಧಾರ್ಮಿಕ ಭಾವೈಕ್ಯಕ್ಕೆ ಸಾಕ್ಷಿಯಂತಿದೆ. ಇಂದಿಗೂ ಸ್ಥಳೀಯ ಮೀನುಗಾರರು, ಹಿಂದೂಗಳು ಭಕ್ತಿಯಿಂದ ಹರಕೆ ಸಲ್ಲಿಸುತ್ತಾ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿಗೆ ಬಂದು ಪ್ರಾರ್ಥಿಸುತ್ತಾರೆ. ಇಲ್ಲಿನ ಶ್ರೀಯಾನ್‌ ಕುಟುಂಬಸ್ಥರ ಜಮೀನಿನಲ್ಲಿರುವ ಈ ದರ್ಗಾದಲ್ಲಿ ಕಾಪು ಪೊಲಿಪು ಜಾಮಿಯಾ ಮಸೀದಿಯ ಆಡಳಿತ ಕಮಿಟಿಯ ಮೇಲುಸ್ತುವಾರಿಯಲ್ಲಿ ವರ್ಷಕ್ಕೊಮ್ಮೆ ಉರೂಸ್‌(ಸಫರ್‌ ಝಿಯಾರತ್‌) ಆಚರಿಸಲಾಗುತ್ತಿದೆ.

ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂಕೇತವಾಗಿರುವ ಈ ಕ್ಷೇತ್ರ ಹಲವು ಕಾರಣೀಕಗಳಿಂದಾಗಿ ಸರ್ವ ಧರ್ಮೀಯರನ್ನು ಆಕರ್ಷಿಸುತ್ತಿದೆ. ಭಟ್ಕಳದಿಂದ ಕೇರಳದವರೆಗಿನ ಸಾವಿರಾರು ಮಂದಿ ಇಲ್ಲಿನ ಉರೂಸ್‌ನಲ್ಲಿ ಭಾಗವಹಿಸುತ್ತಾರೆ. ಇಲ್ಲಿನ ಜಮೀನಿಗೆ ಸಂಬಂಧಿಸಿದ ಹಿಂದೂ ಕುಟುಂಬದವರೇ ಇಲ್ಲಿನ ದೈನಂದಿನ ದೇಖಾರೇಕೆ ನೋಡಿಕೊಳ್ಳುತ್ತಾರೆ. ವರ್ಷಕ್ಕೊಮ್ಮೆ ಕಾಪು ಜಾಮೀಯ ಮಸೀದಿ ಅಡಳಿತ ಮಂಡಳಿ ಉಸ್ತುವಾರಿಯಲ್ಲಿ ಉರೂಸ್‌ ಆಚರಿಸಲಾಗುತ್ತದೆ.

ಹಿಂದೆ ಇಲ್ಲಿನ ಸಮುದ್ರದಲ್ಲಿ ಮುಸ್ಲಿಮರೊಬ್ಬರ ಮೃತದೇಹವೊಂದು ಪತ್ತೆಯಾಗಿದ್ದು, ಆ ಮೃತದೇಹವನ್ನು ಸ್ಥಳೀಯರು ಅಲ್ಲಿಗೆ ಗಾಳ ಹಾಕಲು ಬರುವ ಮುಸ್ಲಿಮರೊಂದಿಗೆ ಸೇರಿ ಅಲ್ಲೇ ಸಮುದ್ರ ಕಿನಾರೆಯಲ್ಲಿ ಧಪನ ಮಾಡಿದ್ದರು. ಕೆಲ ದಿನಗಳ ಬಳಿಕ ಧಪನ ಮಾಡಿರುವ ಕುರುಹುಗಳು ಅಲ್ಲಿಂದ ಮರೆಯಾಗಿ ಸ್ವಲ್ಪ ಎತ್ತರದ ಸ್ಥಳದಲ್ಲಿ ಗೋರಿಯಾಗಿ ಕಂಡುಬಂದು ಅಚ್ಚರಿ ಮೂಡಿಸಿತ್ತು. ಆಗ ಈ ಪವಾಡಗಳಿಗೆ ಸಾಕ್ಷಿಯಾಗಿದ್ದ ಹಿಂದೂ ಬಾಂಧವರೇ ಅದಕ್ಕೆ ಚಾವಣಿಯ ವ್ಯವಸ್ಥೆ ಮಾಡಿದ್ದರರಂತೆ. ಅರಬ್ಬಿ ಸಮುದ್ರದಲ್ಲಿ ಸಿಕ್ಕಿರುವ ಅಪರಿಚಿತ ವ್ಯಕ್ತಿಯ ಮೃತದೇಹದ ಗೋರಿಯಾಗಿರುವ ಕಾರಣ ಇದು ಸಯ್ಯದ್‌ ಅರಬೀ ವಲಿಯುಲ್ಲಾಹಿ ಎಂದು ಹೆಸರು ಪಡೆದಿದೆ.

ಮೀನುಗಾರರು ಇಲ್ಲಿ ಪ್ರಾರ್ಥಿಸಿ ವೃತ್ತಿಗೆ ಹೊರಟರೆ ಸಮೃದ್ಧ ಮೀನಿನ ಕೊಯ್ಲು ಪಡೆಯುತ್ತಾರೆ ಎನ್ನುವ ನಂಬಿಕೆಯಿಂದ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಮೊದಲು ಇಲ್ಲಿಗೆ ಕಾಣಿಕೆ ಸಲ್ಲಿಸಿ ತೆರಳುವ ಪದ್ಧತಿ ಅಂದಿನಿಂದಲೂ ಚಾಲ್ತಿಯಲ್ಲಿದ್ದು, ಈ ದರ್ಗಾ ಹಲವಾರು ಪವಾಡಗಳ ಮೂಲಕ ಸರ್ವಧರ್ಮೀಯರ ವಿಶ್ವಾಸ, ನಂಬಿಕೆಗೆ ಪಾತ್ರವಾಗಿದೆ. ಈಗಲೂ ಮೋಟುಬಲೆ ಫಂಡಿನ ಮೀನುಗಾರರು, ಹಿಂದೂ ಬಾಂಧವರು ಗಂಜಿಗೆ ದೇಣಿಗೆ ನೀಡುತ್ತಾರೆ. ಭಕ್ತಿ ಭಾವದಿಂದ ನಡೆದುಕೊಳ್ಳುತ್ತಾರೆ. ಉರೂಸ್‌ನಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರತಿವರ್ಷ ಮುಸ್ಲಿಂ ಕ್ಯಾಲೆಂಡರ್‌ನ ಸಫರ್‌ ತಿಂಗಳ ಕೊನೆಯ ಬುಧವಾರ ಇಲ್ಲಿ ಸಫರ್‌ ಝಿಯಾರತ್‌ ಆಚರಿಸಿಕೊಂಡು ಬರುತ್ತಾರೆ. ಈ ಬಾರಿ ಸೆ.13 ರಂದು ಉರೂಸ್‌ ಜರುಗಲಿದೆ.

ಹಿರಿಯರ ಕಾಲದಿಂದಲೂ ನಮ್ಮದೇ ಜಮೀನಿನಲ್ಲಿದ್ದ ಈ ದರ್ಗಾದ ಮೇಲೆ ಎಲ್ಲರಿಗೂ ಭಕ್ತಿ, ನಂಬಿಕೆ ಈಗಲೂ ಇದ್ದು, ಅದೇ ಸೌಹಾರ್ದತೆಯನ್ನು ಈಗಲೂ ಕಾಯ್ದುಕೊಂಡು ಬರಲಾಗುತ್ತದೆ. ನಮ್ಮ ಕುಟುಂಬ ಪೂಜಿಸುವ ಮೂಲಶಕ್ತಿಗಳು ಇರುವ ಈ ಸ್ಥಳ ಅತ್ಯಂತ ಪವಿತ್ರವಾಗಿದೆ. ಮೀನುಗಾರರು, ಹಿಂದೂಗಳು ಇಷ್ಟಾರ್ಥಸಿದ್ಧಿಗಾಗಿ ಇಲ್ಲಿಗೆ ಬಂದು ಪ್ರಾರ್ಥಿಸುವುದು ಇಲ್ಲಿನ ವಿಶೇಷ ಎಂದು ದರ್ಗಾ ಇರುವ ಜಮೀನಿನ ಕುಟುಂಬಸ್ಥ ಗುಣವಂತ ಶ್ರೀಯಾನ್‌ ಹೇಳಿದ್ದಾರೆ.

ಇದು ಹಿಂದೂ ಮುಸ್ಲಿಂ ಭಾವೈಕ್ಯಕ್ಕೆ ಅತ್ಯುತ್ತಮ ಉದಾಹರಣೆ. ಬಹಳ ಹಿಂದೆ ಕಾರಣೀಕ ಮೆರೆದಿದ್ದ ಈ ದರ್ಗಾ ಕ್ರಮೇಣ ಪಾಳು ಬಿದ್ದಿದ್ದು, ಮತ್ತೆ ಸ್ಥಳೀಯರ ನೆರವಿನಿಂದ ಅಭಿವೃದ್ಧಿಗೊಳಿಸಲಾಗಿತ್ತು. ವರ್ಷಕ್ಕೊಮ್ಮ ಮಸೀದಿ ಕಮಿಟಿಯವರ ನೇತೃತ್ವದಲ್ಲಿ ಉರೂಸ್‌ ಆಚರಿಸಲಾಗುತ್ತಿದೆ. ಉಳಿದ ದಿನಗಳಲ್ಲಿ ಸ್ಥಳೀಯರೇ ಇಲ್ಲಿಉಸ್ತುವಾರಿ ನೋಡಿಕೊಳ್ಳುತ್ತಾರೆ ಎನ್ನುತ್ತಾರೆ ಪೊಲಿಪು ಕಾಪು ನಿವೃತ್ತ ಶಿಕ್ಷಕರಾದ ಅಬ್ದುಲ್‌ ಹಮೀದ್‌.

Related Articles

Back to top button
error: Content is protected !!