ಕರಾವಳಿಯಲ್ಲಿ ಮೀನುಗಾರಿಕೆ ನಿರ್ಬಂಧ ಇಂದಿನಿಂದ ತೆರವು
Views: 8
ಕನ್ನಡ ಕರಾವಳಿ ಸುದ್ದಿ: ಕರಾವಳಿಯಲ್ಲಿ ಮೀನುಗಾರಿಕೆಗೆ ಎರಡು ತಿಂಗಳಿನಿಂದ ಹೇರಿದ್ದ ನಿಷೇಧ ಇಂದು ಕೊನೆಯಾಗಲಿದ್ದು, ಮೀನುಗಾರಿಕೆಗೆ ಅವಕಾಶ ನೀಡಿದ ಬೆನ್ನಲ್ಲೇ ಮೀನುಗಾರರು ತಮ್ಮ ಬೋಟುಗಳಿಗೆ ಪೂಜೆ ಸಲ್ಲಿಸಿ ಸಮುದ್ರಕ್ಕಿಳಿಯಲು ಭರದ ಸಿದ್ದತೆ ಮಾಡಿಕೊಂಡಿದ್ದಾರೆ. ಆದರೆ ಮತ್ತೆ ಹವಾಮಾನ ವೈಪರೀತ್ಯ ಇದೀಗ ಮೀನುಗಾರರಿಗೆ ಸಂಕಷ್ಟ ತಂದೊಡ್ಡಿದೆ. ಕರಾವಳಿಯಲ್ಲಿ ಮತ್ತ್ಯಸಂತಾನ ವೃದ್ಧಿ ಹಿನ್ನೆಲೆಯಲ್ಲಿ ಎಂದಿನಂತೆ ಎರಡು ತಿಂಗಳ ಕಾಲ ಮೀನುಗಾರಿಕೆಗೆ ನಿಷೇಧ ಹೇರಲಾಗಿತ್ತು.
ಅರಬ್ಬಿ ಸಮುದ್ರದಲ್ಲಿ ಮತ್ಸ ಬೇಟೆಗಿಳಿಯಲು ಮೀನುಗಾರರು ಸಿದ್ದರಾಗಿದ್ದಾರೆ. ಆದರೆ ಇದೀಗ ಮತ್ತೆ ಹವಾಮಾನ ಬದಲಾವಣೆ ಆಗುತ್ತಿದ್ದು, ಸಮುದ್ರ ಕ್ಷುದ್ರವಾಗುವ ಸಾಧ್ಯತೆ ಇದೆ. ಇದಲ್ಲದೇ ಸಮುದ್ರ ಭಾಗದಲ್ಲಿ ಬಿಸಿಗಾಳಿ ಬೀಸಿದ್ದರಿಂದ ಈ ಬಾರಿ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುವುದು ಕಷ್ಟ ಎನ್ನುತ್ತಾರೆ ಸಂಶೋಧಕರು. ಹೀಗಾಗಿ ಈ ಭಾರಿ ಕಳೆದ ವರ್ಷಕ್ಕಿಂತ ಕಡಿಮೆ ಆದಾಯ ಬರಲಿದ್ದು, ಉತ್ತಮ ಮೀನು ಸಿಗುವ ನಿರೀಕ್ಷೆ ಕಡಿಮೆ ಎನ್ನಲಾಗಿದೆ. ಸದ್ಯ ಉತ್ತಮ ಮತ್ತ್ಯ ಬೇಟೆಯ ನಿರೀಕ್ಷೆ ಹೊಂದಿರುವ ಮೀನುಗಾರರು, ಲಕ್ಷಾಂತರ ರೂಪಾಯಿ ಸುರಿದು ಬೋಟುಗಳನ್ನು ಸರಿಪಡಿಸಿಕೊಂಡು ಸಮುದ್ರಕ್ಕಿಳಿಯಲು ಸಿದ್ಧವಾಗಿದ್ದಾರೆ. ಇದರ ನಡುವೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆಗಸ್ಟ್ ತಿಂಗಳ ಮೊದಲ ವಾರವೇ ಸಮುದ್ರ ಕ್ಷುದ್ರವಾಗುವ ಎಚ್ಚರಿಕೆ ನೀಡಿದೆ.






