ಮುಂದುವರಿದ ಮಳೆ ಆರ್ಭಟ: ಕರಾವಳಿ, ಮಲೆನಾಡಿನಲ್ಲಿ ಕಟ್ಟೆಚ್ಚರ

Views: 0
ರಾಜ್ಯಾದ್ಯಂತ ಹಲವೆಡೆ ಭಾರೀ ಮಳೆಯಿಂದಾಗಿ ಸಂಭವಿಸಿದ ದುರಂತದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು,ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಭಾರಿ ಮಳೆಯಿಂದಾಗಿ ಜನಜೀವನ ಸ್ಥಗಿತಗೊಂಡಿದ್ದು ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳು ಮಳೆಯಿಂದ ತತ್ತರಿಸಿದೆ.
ನದಿಗಳು ಉಕ್ಕಿ ಹರಿಯುತ್ತಿದ್ದು, ನೆರೆಗೆ ಹಲವೆಡೆ ಗ್ರಾಮಗಳು, ರಸ್ತೆಗಳು, ಜಲಾವೃತವಾಗಿದ್ದು, ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತವಾಗಿದೆ.
ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಠಾತ್ ಪ್ರವಾಹದ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಎಚ್ಚರಿಕೆಯಿಂದ ಇರಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಸಾರ್ವಜನಿಕರು ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
ಕುಂದಾಪುರದಲ್ಲಿ ಹರಿಯುತ್ತಿರುವ ಪಂಚ ನದಿಗಳು ತುಂಬಿ ಹರಿಯುತ್ತಿದ್ದು,ನದಿ ತೀರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ವಿಪರೀತ ಮಳೆಯಿಂದಾಗಿ ತ್ರಾಸಿ- ಮರವಂತೆ ಬೀಚ್ ನಲ್ಲಿ ಕಡಲಬ್ಬರ ಜಾಸ್ತಿಯಾಗಿ ಹೆದ್ದಾರಿಯ ತಡೆಗೋಡೆ ಕಲ್ಲುಗಳಿಗೆ ಅಪ್ಪಳಿಸಿ ನೀರು ಹೆದ್ದಾರಿಗೆ ಚಿಮ್ಮುತ್ತಿದೆ. ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯದಂತೆ ಪೊಲೀಸ್ ಇಲಾಖೆಯವರು ಎಚ್ಚರಿಕೆ ನೀಡಿ ರಿಬ್ಬನ್ ಗಳನ್ನು ಕಟ್ಟಿದ್ದಾರೆ.
ಮಲೆನಾಡು ಕರಾವಳಿ ಸಂಪರ್ಕಿಸುವ ಆಗುಂಬೆಯ ಆರು ಮತ್ತು ಎಂಟನೇ ಸುತ್ತಿನ ತಡೆಗೋಡೆ ಕುಸಿದಿದೆ. ರಸ್ತೆಯ ಬದಿ ಸಂಪೂರ್ಣ ಕುಸಿಯುವ ಸಾಧ್ಯತೆ ಇರುವುದರಿಂದ ಘನ ವಾಹನಗಳ ಸಂಚಾರದಿಂದ ಘಾಟಿ ಬಂದಾಗುವ ಸಾಧ್ಯತೆ ಇದೆ.
ಬಂಡಾಜೆ ಅರ್ಬಿ, ಎರ್ಮಾಯಿ ಫಾಲ್ಸ್ ಗಳನ್ನ ವೀಕ್ಷಿಸಲು ಬರುವ ಪ್ರವಾಸಿಗಳಿಗೆ ಮುಂದಿನ ಆದೇಶದವರೆಗೆ ನಿಷೇಧ ಹೇರಿದೆ.






