ಜಮೀನಿನಲ್ಲಿ ಹತ್ತಿ ಬಿಡಿಸುತ್ತಿರುವಾಗ ಎಳೆದೊಯ್ದ ಹುಲಿ: ರೈತ ಸಾವು
Views: 66
ಕನ್ನಡ ಕರಾವಳಿ ಸುದ್ದಿ: ಹತ್ತಿ ಬೆಳೆಯಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿರುವ ಘಟನೆ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಸಮೀಪದ ಬಡಗಲಪುರ ಗ್ರಾಮದಲ್ಲಿ ನಡೆದಿದೆ. ಹುಲಿ ದಾಳಿಯಿಂದ ರೈತ ಮೃತಪಟ್ಟಿದ್ದಾನೆ.
ಬಡಗಲಪುರ ಗ್ರಾಮದ ಮಹದೇವ (34) ಮೃತ ರೈತ. ಹತ್ತಿ ಬೆಳೆಯ ಜಮೀನಿನಲ್ಲಿ ರೈತ ಎಂದಿನಂತೆ ಕೆಲಸ ಮಾಡುತ್ತಿದ್ದನು. ಜಮೀನಿನಲ್ಲಿ ಹತ್ತಿಯನ್ನು ಬಿಡಿಸುತ್ತಿರುವಾಗ ವ್ಯಾಘ್ರ ದಾಳಿ ಮಾಡಿ ರೈತನ ರಕ್ತ ಹೀರಿದೆ. ಬಳಿಕ ಕಾಡಿನತ್ತ ಎಳೆದೊಯ್ಯುತ್ತಿರುವಾಗ ಸ್ಥಳದಲ್ಲಿದ್ದ ಸಾರ್ವಜನಿಕರು, ರೈತರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕೂಗಾಟ, ಚೀರಾಟ ಮಾಡಿದ್ದಾರೆ. ಇದರಿಂದ ಬೃಹತ್ ಗಾತ್ರದ ಹುಲಿ, ರೈತನ ಕಳೇಬರವನ್ನು ಅಲ್ಲೇ ಬಿಟ್ಟು ಓಡಿ ಹೋಗಿದೆ. 
ಸದ್ಯ ರೈತನನ್ನು ಬಲಿ ಪಡೆದಿರುವ ಹುಲಿಯಿಂದ ಬಡಗಲಪುರ ಮತ್ತು ಸುತ್ತಮುತ್ತಲ ಗ್ರಾಮಸ್ಥರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ, ರೈತರ ತಾಳ್ಮೆ ಕಳೆದುಕೊಂಡಿದ್ದಾರೆ. ರೈತ ಮಹದೇವ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.






