ವೈದ್ಯರ ಮಹಾ ಎಡವಟ್ಟು! ಎಡಕಾಲಿನ ಶಸ್ತ್ರಚಿಕಿತ್ಸೆಯ ಬದಲು ಬಲಕಾಲನ್ನು ಕೊಯ್ದರು!
Views: 213
ಕನ್ನಡ ಕರಾವಳಿ ಸುದ್ದಿ : ಹಾಸನದಲ್ಲಿ ಜಿಲ್ಲಾ ಆಸ್ಪತ್ರೆ ವೈದ್ಯರು ಮಹಾ ಎಡವಟ್ಟೊಂದನ್ನು ಮಾಡಿದ್ದು, ರೋಗಿಯೊಬ್ಬರ ಎಡಗಾಲು ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಜಿಲ್ಲಾಸ್ಪತ್ರೆಯ ವೈದ್ಯ ಸಂತೋಷ ಅವರು ಜ್ಯೋತಿ ಎಂಬ ಮಹಿಳೆಯ ಬಲಗಾಲು ಕೊಯ್ದು, ಅಲ್ಲಿ ತಾವು ಕಾಣಬೇಕಿದ್ದ ರಾಡ್ ಕಾಣದೆ ಗಾಬರಿಯಾಗಿದ್ದಾರೆ. ನಂತರ ಸಾವರಿಸಿಕೊಂಡು ಎಡಗಾಲನ್ನೂ ಕುಯ್ದಿದ್ದಾರೆ. ಹೀಗೆ ಮಹಿಳೆ ಎರಡೂ ಕಾಲುಗಳನ್ನು ಕೊಯ್ಯಿಸಿಕೊಂಡು ಆಘಾತಕ್ಕೊಳಗಾಗಿದ್ದಾರೆ.
ಗಾಯಗೊಂಡಿರುವ ಜ್ಯೋತಿ, ಚಿಕ್ಕಮಂಗಳೂರು ಜಿಲ್ಲೆಯ ಬೂಚನಹಳ್ಳಿಯ ಕಾವಲು ಗ್ರಾಮದ ನಿವಾಸಿಯಾಗಿದ್ದಾರೆ. ಎರಡುವರೆ ವರ್ಷದ ಹಿಂದೆ ಜ್ಯೋತಿ ಅಪಘಾತದಲ್ಲಿ ಗಾಯಗೊಂಡಿದ್ದರು. ತೀವ್ರ ಪೆಟ್ಟಾಗಿ ನಡೆಯಲು ಸಾಧ್ಯವಾಗದೆ ಇದ್ದುದರಿಂದ ವೈದ್ಯರು ಎಡಗಾಲಿಗೆ ರಾಡ್ ಅಳವಡಿಸಿದ್ದರು. ಇತ್ತೀಚಿಗೆ ಕಾಲಿಗೆ ಅಳವಡಿಸಿದ್ದ ರಾಡ್ನಿಂದ ಜ್ಯೋತಿಗೆ ನೋವು ಕಾಣಿಸಿಕೊಂಡಿತ್ತು.
ಹಿಮ್ಸ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾಕ್ಟರ್ ಸಂತೋಷ್ ಬಳಿ ತೋರಿಸಿದ್ದರು. ರಾಡನ್ನು ತೆಗೆಯಲು ಸೂಚಿಸಲಾಗಿತ್ತು. ಸೆಪ್ಟೆಂಬರ್ 20ರಂದು ಹಾಸನದ ಹಿಮ್ಸ್ ಆಸ್ಪತ್ರೆಗೆ ಜ್ಯೋತಿ ದಾಖಲಾಗಿದ್ದರು. ಜ್ಯೋತಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯ ಸಂತೋಷ್, ಶಸ್ತ್ರಚಿಕಿತ್ಸೆಯ ವೇಳೆ ಎಡಗಾಲು ಬದಲು ಬಲಗಾಲು ಕೊಯ್ದು ಎಡವಟ್ಟು ಮಾಡಿದ್ದಾರೆ. ತಮ್ಮ ತಪ್ಪಿನ ಅರಿವಾಗಿ ಎಡಗಾಲನ್ನೂ ಕೊಯ್ದು ಅದಕ್ಕೆ ಅಳವಡಿಸಿದ್ದ ರಾಡ್ ಅನ್ನು ತೆಗೆದಿದ್ದಾರೆ.






