ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್: ವಿದ್ಯಾರ್ಥಿ ಸಂಸತ್ ಪದಗ್ರಹಣ ಸಮಾರಂಭ

Views: 371
ಕನ್ನಡ ಕರಾವಳಿ ಸುದ್ದಿ: ಗುರುಕುಲ ಪಬ್ಲಿಕ್ ಶಾಲೆ, ವಕ್ವಾಡಿ – ಕೊಟೇಶ್ವರದಲ್ಲಿ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ ಪದಗ್ರಹಣ ಸಮಾರಂಭವು ಜುಲೈ 18ರಂದು ವಿಜೃಂಭಣೆಯಿಂದ ಹಾಗೂ ಗೌರವಪೂರ್ವಕವಾಗಿ ಜರುಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರೋಟರಿ ಸೆಂಟೆನಿಯಲ್ ಗವರ್ನರ್ ಶ್ರೀ ಎ.ಎಸ್.ಎನ್ ಹೆಬ್ಬಾರ್ ಅವರು ಶಾಲಾ ಧ್ವಜಾರೋಹಣ ನೆರವೇರಿಸಿ, ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ವಿನಯತೆಯ ಮಹತ್ವದ ಕುರಿತು ಮಾತನಾಡಿದರು. ತಮ್ಮ ಜೀವನ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ಅವರಲ್ಲಿ ಉತ್ಸಾಹ ತುಂಬಿಸಿದರು.
ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವು ಶಾಲಾ ಬ್ಯಾಂಡ್ನ ಸಡಗರಭರಿತ ಸಂಗೀತದೊಂದಿಗೆ ಧ್ವಜಾರೋಹಣ ನಡೆಯಿತು. ನಂತರ ವಿದ್ಯಾರ್ಥಿನಿಯರು ನೃತ್ಯ ಪ್ರಸ್ತುತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಅನುಪಮಾ ಎಸ್.ಶೆಟ್ಟಿ, ಶಾಲಾ ಜಂಟಿ ಕಾರ್ಯಾನಿರ್ವಾಹಕರು ಮಾತನಾಡಿ, ನಾಯಕತ್ವ ಹಾಗೂ ಶಿಷ್ಟ ನಡವಳಿಕೆಗೆ ಪಠ್ಯೇತರ ಚಟುವಟಿಕೆಗಳ ಪಾತ್ರವನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಾಲಾ ಪ್ರಾಂಶುಪಾಲರಾದ ಡಾ.ರೂಪಾ ಶೆಣೈ ವಿದ್ಯಾರ್ಥಿ ಸಂಸತ್ ಕಾರ್ಯಚಟುವಟಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿ, ನೂತನ ಪದಾಧಿಕಾರಿಗಳಿಗೆ ಶುಭಾಶಯಗಳನ್ನು ತಿಳಿಸಿದರು.
2025-26 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ನಾಯಕನಾಗಿ ಮಾl ಶಶಾಂಕ್ ಯು.ಕೆ, ವಿದ್ಯಾರ್ಥಿ ನಾಯಕಿಯಾಗಿ ಕುಮಾರಿ ಅವನಿ ಸುರೇಶ್ ಮತ್ತು ಶಾಲಾ ಸಂಸತ್ ಸ್ಪೀಕರ್ ಆಗಿ ಕುಮಾರಿ ಸನ್ಮತಿ,ವಿರೋಧ ಪಕ್ಷದ ನಾಯಕರಾಗಿ,ಮಾಸ್ಟರ್ ಅನ್ವೇಶ್ ಪೂಜಾರಿ ಮತ್ತು ಕುಮಾರಿ ವಿದ್ಯಾವತಿ ಆಯ್ಕೆಯಾದರು.
ಶಾಲಾ ವಿದ್ಯಾರ್ಥಿಗಳ ನಾಲ್ಕು ತಂಡಗಳಾದ ರಾಮನ್, ಕಲ್ಪನಾ ,ಕಲಾಂ ಮತ್ತು ಆರ್ಯಭಟದ ಪದಾಧಿಕಾರಿಗಳನ್ನು ಕೂಡ ಆಯ್ಕೆ ಮಾಡಲಾಯಿತು.
ಈ ಸಂದರ್ಭಕ್ಕೆ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಾಕ್ಷಿಯಾದರು. ಕಾರ್ಯಕ್ರಮವನ್ನು ಸಹಶಿಕ್ಷಕಿ ಸುಮಲತಾ ನಿರೂಪಿಸಿ, ಪ್ರಿಯಾಂಕಾ ಸ್ವಾಗತಿಸಿದರು. ಸಹಶಿಕ್ಷಕಿ ಸಹನಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.