ಅಮೃತಧಾರೆ ಕಿರುತೆರೆ ನಟಿ ಹಾಗೂ ನಿರೂಪಕಿಗೆ ಚಾಕು ಇರಿತ

Views: 283
ಕನ್ನಡ ಕರಾವಳಿ ಸುದ್ದಿ:ಶೀಲ ಶಂಕಿಸಿ ಕಿರುತೆರೆ ನಟಿ ಹಾಗೂ ನಿರೂಪಕಿಗೆ ಪತಿಯೇ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ಚಾಕು ಇರಿತದಿಂದ ಗಾಯಗೊಂಡಿರುವ ಮಂಜುಳಾ ಅಲಿಯಾಸ್ ಶೃತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇಪ್ಪತ್ತು ವರ್ಷದ ಹಿಂದೆ ಆಟೋಚಾಲಕ ಅಮರೇಶ್ (49) ಎಂಬುವವರನ್ನು ಶೃತಿ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದು, ಶ್ರೀನಗರದ ಮುನೇಶ್ವರ ಬ್ಲಾಕ್ನಲ್ಲಿ ನೆಲೆಸಿದ್ದಾರೆ.ಕಿರುತೆರೆ ನಟಿಯಾಗಿರುವ ಶೃತಿ ಅವರು ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದರು. ಅಲ್ಲದೇ ಮದ್ಯ ಸೇವನೆ ಮಾಡುತ್ತಿದ್ದರಿಂದ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.
ಕೆಲ ತಿಂಗಳುಗಳಿಂದ ಶೃತಿಯ ನಡವಳಿಕೆಯಿಂದ ಅಮರೇಶ್ ಕೋಪಗೊಂಡಿದ್ದನು. ಆಕೆಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸಿ ಜಗಳವಾಡುತ್ತಿದ್ದನು.ಇತ್ತೀಚೆಗೆ ಕುಟುಂಬದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ಮಾಡಿ ಹೊಂದಿಕೊಂಡು ಹೋಗುವಂತೆ ದಂಪತಿಗೆ ಬುದ್ದಿ ಹೇಳಿದ್ದರು ಆದರೂ ಶೃತಿ ತಿದ್ದುಕೊಂಡಿರಲಿಲ್ಲ.
ಇದರಿಂದ ಕೋಪಗೊಂಡ ಪತಿ ಜು.4 ರಂದು ಮಕ್ಕಳು ಕಾಲೇಜಿಗೆ ಹೋಗಿದ್ದ ಸಮಯದಲ್ಲಿ ಚಾಕುವಿನಿಂದ ಶೃತಿಗೆ ಮನಬಂದಂತೆ ದೇಹದ ವಿವಿಧ ಭಾಗಗಳಿಗೆ ಇರಿದಿದ್ದಾನೆ.ಚಾಕು ಇರಿತದಿಂದ ಗಂಭೀರ ಗಾಯಗೊಂಡಿರುವ ಶೃತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹನುಮಂತನಗರ ಠಾಣೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿ ಅಮರೇಶ್ನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.