ಗುರುಕುಲ ಪದವಿಪೂರ್ವ ಕಾಲೇಜಿನಲ್ಲಿ ಕಾವ್ಯ ಕಮ್ಮಟ ಹಾಗೂ ಹೊತ್ತಗೆ – ಓದು- ವಿಮರ್ಶೆ ಕಾರ್ಯಗಾರ

Views: 231
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಕಾವ್ಯ ಕಮ್ಮಟ ಹಾಗೂ ಹೊತ್ತಗೆ – ಓದು – ವಿಮರ್ಶೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಚೇರ್ಮನ್ ಶ್ರೀ ಕೆ ಸುಭಾಶ್ಚಂದ್ರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ- ಕನ್ನಡ ಸಾಹಿತ್ಯಕ್ಕೆ ಶ್ರೀಮಂತವಾದ ಪರಂಪರೆ ಇದೆ .ವಿದ್ಯಾರ್ಥಿಗಳು ಕಲಿಕಾ ಸಂದರ್ಭದಲ್ಲಿ ತಮ್ಮ ದೇಶದ ಸಂಸ್ಕೃತಿಯನ್ನು ಅನಾವರಣಗೊಳಿಸುವ ಭಾಷೆ ಮತ್ತು ಸಾಹಿತ್ಯದ ಬೇರೆ ಬೇರೆ ರೂಪಗಳನ್ನು ಅಭ್ಯಸಿಸಬೇಕು .ತನ್ಮೂಲಕ ನಮ್ಮ ದೇಶೀ ಸಾಹಿತ್ಯ ಪರಂಪರೆಯನ್ನು ಮುಂದಿನ ತಲೆಮಾರಿಗೂ ದಾಟಿಸಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಯಲ್ಲಾಪುರ ವಿಶ್ವ ದರ್ಶನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ದತ್ತಾತ್ರಯ ಗೋಪಾಲಕೃಷ್ಣ ಗಾಂವ್ಕರ್ ರವರು ಕಾವ್ಯ ಹುಟ್ಟುವ ಮತ್ತು ಕಾವ್ಯ ಕಟ್ಟುವ ಬಗೆ ಕುರಿತು ಮಾತನಾಡುತ್ತಾ ಒಂದು ಕವಿತೆ ಹುಟ್ಟುದೆಂದರೆ ಜೇನುಗೂಡಿನಲ್ಲಿ ತುಪ್ಪ ಕಟ್ಟಿದ ಹಾಗೆ. ಕಾವ್ಯವು ಮಗುವೊಂದು ಧರಿಸಿದ ಹೊಸ ತೊಡುಗೆಯಂತಿರಬೇಕು .ನಮ್ಮಲ್ಲಿನ ಆಲೋಚನೆ ಹಾಗೂ ವಿಚಾರಗಳನ್ನು ತಲೆಮಾರಿನಿಂದ ತಲೆಮಾರಿಗೆ ತಲುಪಿಸಲು ಒಂದು ಉತ್ತಮ ಸಾಧನೆವೇ ಕಾವ್ಯವಾಗಿದೆ ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ- ಡಾ. ಹಯವದನ ಉಪಾಧ್ಯ, ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು – ಇಂಗ್ಲಿಷ್ ಕಾವ್ಯದ ಸೊಬಗಿನ ಬಗ್ಗೆ ತಿಳಿಸುತ್ತಾ ,ಕನ್ನಡ – ಇಂಗ್ಲಿಷ್ ಕಾವ್ಯಗಳಲ್ಲಿನ ಕೊಳು ಕೊಡುಗೆಗಳ ಬಗ್ಗೆ ತಿಳಿಸಿದರು.
ನವೋದಯ ಕಾಲಘಟ್ಟಗಳಲ್ಲಿ ಕನ್ನಡ ಕವಿತೆಗಳಲ್ಲಿ ಇಂಗ್ಲಿಷ್ ಕಾವ್ಯಗಳ ಪ್ರಭಾವ ತಿಳಿಸುತ್ತಾ ವರ್ಡ್ಸ್ ವರ್ತ್ತ ,ಕೀಟ್ಸ್, ಶೆಲ್ಲಿಯ ಕವಿತೆಗಳು ರಮ್ಯ ಸಾಹಿತ್ಯಕ್ಕೆ ಧಕ್ಕಿದ ಕೊಡುಗೆಗಳಾಗಿವೆ ಎಂದರು.
ಇದೇ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ಕವಿತಾ ರಚನಾ ಕೌಶಲವನ್ನು ತಿಳಿಸಿಕೊಡಲಾಗಿತ್ತು ಆನಂತರದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಕವಿತೆಗಳನ್ನು ವಾಚಿಸಿದರು. ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಂಯೋಜಕರಾದ ಡಾ.ಕೃಷ್ಣರಾಜ ಕರಬ ಕಮ್ಮಟದ ಉದ್ದೇಶ ಆಶಯ ತಿಳಿಸಿದರು. ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ರವರು ಪ್ರಾಸ್ತಾವಿಕ ಮಾತಿನೊಂದಿಗೆ ಸರ್ವರನ್ನು ಸ್ವಾಗತಿಸಿದರು .ಕುಮಾರಿ ಕೃತಿ ಶ್ರೀ ಕಾರ್ಯಕ್ರಮವನ್ನು ನಿರ್ವಹಿಸಿದರೆ ,ಶಶಿಧರ್ ಅಂತಿಮವಾಗಿ ಎಲ್ಲರಿಗೂ ವಂದಿಸಿದರು.