ಕೊಲ್ಲೂರು ಮೂಕಾಂಬಿಕೆಗೆ ಭಕ್ತರಿಂದ ಚಿನ್ನದ ಮುಖವಾಡ ಸಮರ್ಪಣೆ

Views: 181
ಕನ್ನಡ ಕರಾವಳಿ ಸುದ್ದಿ : ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಕರ್ನಾಟಕದ ದಕ್ಷಿಣದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಪರಶುರಾಮನು ಸೃಷ್ಟಿಸಿದ ಮೋಕ್ಷದ 7 ವಾಸಸ್ಥಾನಗಳಲ್ಲಿ ಇದು ಒಂದು ಎಂದು ಹೇಳಲಾಗುತ್ತದೆ. ಮೂಕಾಂಬಿಕಾ ದೇವಿಗೆ 1 ಕೆ.ಜಿ ರತ್ನ ಖಚಿತ ಚಿನ್ನದ ಮುಖವಾಡ ಸಮರ್ಪಣೆ ಮಾಡಲಾಗಿದೆ.
ಕೊಲ್ಲೂರು ಮೂಕಾಂಬಿಕಾ ದೇವಿಗೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಆಯುರ್ವೇದ ವೈದ್ಯ ಆಗಿರುವ ಡಾ.ಕೆ ಲಕ್ಷ್ಮೀನಾರಾಯಣ ಅವರು 1 ಕೆ.ಜಿ ರತ್ನ ಖಚಿತ ಚಿನ್ನದ ಮುಖವಾಡ ಸಮರ್ಪಣೆ ಮಾಡಿದ್ದಾರೆ. ದೇವಿಗೆ ಚಿನ್ನದ ಮುಖವಾಡ ಸಮರ್ಪಿಸಿರುವ ಡಾ.ಕೆ ಲಕ್ಷ್ಮೀನಾರಾಯಣ ಹಾಗೂ ಅವರ ಕುಟುಂಬಸ್ಥರಿಗೆ ದೇವಾಲಯದ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.
ದೇವಿಗೆ ರತ್ನ ಖಚಿತ ಚಿನ್ನದ ಮುಖವಾಡ ಸಮರ್ಪಣೆ ಮಾಡುವಾಗ ವಿಶೇಷ ಪೂಜೆ ನೆರವೇರಿಸಲಾಯಿತು. ಎಲ್ಲಾ ಕಾರ್ಯಗಳನ್ನು ದೇವಾಲಯದವರು ಅತ್ಯುತ್ತಮವಾಗಿ ನಡೆಸಿಕೊಟ್ಟರು. ಡಾ.ಕೆ ಲಕ್ಷ್ಮೀನಾರಾಯಣ ಹಾಗೂ ಅವರ ಕುಟುಂಬಸ್ಥರು ಪೂಜೆಯ ಬಳಿಕ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು.
ಚಿನ್ನದ ಮುಖವಾಡವೂ ಸುಂದರವಾಗಿ ರಚನೆ ಮಾಡಲಾಗಿದ್ದು ನೋಡುಗರ ಗಮನ ಸೆಳೆಯುತ್ತದೆ. ದೇವಿಯ ಮುಖವಂತೂ ಶಾಂತವಾಗಿದೆ. ಕಣ್ಣುಗಳು, ಮೂಗು, ಹಣೆಯಲ್ಲಿ ಬೊಟ್ಟು, ಮೂಗುತಿ, ಕಿವಿಯೋಲೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಇದರ ಜೊತೆಗೆ ದೇವಿಗೆ ಇರುವ ಕಿರೀಟವಂತೂ ಮಹಾ ಅದ್ಭುತ. ಹಸಿರು, ಬಿಳಿ ಹಾಗೂ ಗುಲಾಬಿ ಹರಳುಗಳಿಂದ ಕಿರೀಟ ಸುಂದರವಾಗಿದೆ. ಕಿರೀಟವೂ ಅರ್ಧಚಂದ್ರನ ಒಳಗೊಂಡಿದೆ.
ಈ ಸಂದರ್ಭದಲ್ಲಿ ದೇವಳದ ಆಡಳಿತ ಧರ್ಮದರ್ಶಿ ಬಾಬು ಶೆಟ್ಟಿ ಅವರು ಸೇವಾಕರ್ತರಿಗೆ ಅಭಿನಂದಿಸಿದರು ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.