ರಾತ್ರಿಯಿಡೀ ತೋಟದಲ್ಲೇ ಕಳೆದ ಮಗು ಪಾಲಕರ ಮಡಿಲು ಸೇರಿದ್ದು ಅಚ್ಚರಿ!
Views: 44
ಕನ್ನಡ ಕರಾವಳಿ ಸುದ್ದಿ: ಒಂದೂವರೆ ವರ್ಷದ ಮಗುವೊಂದು ಧಾರಾಕಾರ ಮಳೆಯಲ್ಲಿ ನೆನೆದು, ರಾತ್ರಿಯಿಡೀ ತೋಟದಲ್ಲೇ ಕಳೆದರೂ ಸುರಕ್ಷಿತವಾಗಿ ಪಾಲಕರ ಮಡಿಲು ಸೇರಿರುವುದು ಸದ್ಯ ಸ್ಥಳೀಯರನ್ನೇ ಅಚ್ಚರಿಗೆ ದೂಡಿದೆ.
ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದ ಟೀ ಎಸ್ಟೇಟ್ನಲ್ಲಿ ಗುರುವಾರ ಸಂಜೆ 4ಗಂಟೆ ಸುಮಾರಿನಲ್ಲಿ ನಾಲ್ಕು ಮಕ್ಕಳು ಎಸ್ಟೇಟ್ನ ಟೀ ಫ್ಯಾಕ್ಟರಿ ಬಳಿ ಶಿವಂ ಎಂಬ ಒಂದೂವರೆ ವರ್ಷದ ಮಗುವಿನ ಜತೆ ಸೇರಿ ಆಟವಾಡುತ್ತಿದ್ದರು. 8 ವರ್ಷದ ಬಾಲಕಿಯೊಬ್ಬಳು ಮಕ್ಕಳನ್ನು ಕರೆದುಕೊಂಡು ವಾಸವಿರುವ ಕೂಲಿ ಲೈನಿಗೆ ಹೋಗಿದ್ದಾಳೆ. ಆದರೆ ಶಿವಂನನ್ನು ಮರೆತುಬಿಟ್ಟಿದ್ದಳು. ಶಿವಂ ಅಂಬೆಗಾಲಿಕ್ಕುತ್ತ ತೋಟದೊಳಗೆ ಹೋಗಿದ್ದು, ಮಗು ಕಾಣದಿದ್ದರಿಂದ ಪಾಲಕರು ಬಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ವೃತ್ತ ನಿರೀಕ್ಷಕ ಕೆ.ವಿ.ರಾಜಶೇಖರ್, ಬಣಕಲ್ ಪಿಎಸ್ಐ ದಿಲೀಪ್ ಕುಮಾರ್ ನೇತೃತ್ವದಲ್ಲಿ ತಡ ರಾತ್ರಿಯವರೆಗೂ ಹುಡುಕಾಡಲಾಯಿತು. ಚಿಕ್ಕಮಗಳೂರಿನಿಂದ ಶ್ವಾನದಳ ಕರೆಸಿಕೊಳ್ಳಲಾಗಿತ್ತು. ರಾತ್ರಿ 12ರ ನಂತರ ಧಾರಾಕಾರ ಮಳೆಯಾಗಿದ್ದರಿಂದ ಕಾರ್ಯಾಚರಣೆ ನಿಲ್ಲಿಸಲಾಯಿತು. ಶುಕ್ರವಾರ ಬೆಳಗಿನ ಜಾವ ಮತ್ತೆ ಹುಡುಕಾಟ ಆರಂಭಿಸಿದರು.
ಮಗು ವಾಸವಿದ್ದ ಕೂಲಿಲೈನಿನ 300 ಮೀಟರ್ ದೂರದಲ್ಲಿ ಬೆಳಗ್ಗೆ 9ಕ್ಕೆ ಮಗುವನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಮಧ್ಯಪ್ರದೇಶದ ಭೂಪಾಲ್ಡಿಂದ ಮೇ 5ರಂದು ಗೋನು ಹಾಗೂ ಸೋನು ದಂಪತಿ ಶಿವಂನೊಂದಿಗೆ ಕೂಲಿ ಕೆಲಸಕ್ಕೆ ಬಂದಿದ್ದರು. ಮಗು ಹುಟ್ಟಿನಿಂದಲೂ ಅಳುವುದು ಮತ್ತು ನಗುವುದು ಎರಡೂ ಇಲ್ಲ ಎಂದು ಪಾಲಕರು ಹೇಳಿದ್ದಾರೆ






