ಶಿವಮೊಗ್ಗದಲ್ಲಿ ಭೀಕರ ಹತ್ಯೆ ಮಾಡಿ,ಅಂಗಾಂಗಗಳನ್ನು ಕತ್ತರಿಸಿ ನದಿಗೆ ಎಸೆದ ಆರೋಪಿಗಳ ಬಂಧನ

Views: 227
ಶಿವಮೊಗ್ಗ: ಅನೈತಿಕ ಸಂಬಂಧದಿಂದ ಭೀಕರ ಹತ್ಯೆ ಮಾಡಿ, ಅಂಗಾಂಗಗಳನ್ನು ಕತ್ತರಿಸಿ ನದಿಗೆ ಎಸೆದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಶಿಕಾರಿಪುರ ತಾಲ್ಲೂಕು ನಾಗೀಹಳ್ಳಿ ಗ್ರಾಮದ ಕೃಷ್ಣಪ್ಪ (33) ಕೊಲೆಯಾದ ದುರ್ದೈವಿ.
ಕಳೆದ ಮೂರು ದಿನಗಳ ಹಿಂದೆ ಕೃಷ್ಣಪ್ಪ ಅವರ ಪತ್ನಿ ಕಾಣೆಯಾಗಿದ್ದಾರೆ ಎಂದು ಶಿರಾಳಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದರು. ಸಂಶಯದ ಮೇರೆಗೆ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.ಆದರೆ ಕಿರಣ್ ಬಂಧನದ ಬಳಿಕ ಕೊಲೆ ರಹಸ್ಯ ಬಯಲಾಗಿದೆ.
ಕೃಷ್ಣಪ್ಪನ ಪತ್ನಿ ಜತೆ ಕಿರಣ್ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರವಾಗಿ ಕಿರಣನನ್ನು ಕರೆದು ಕೃಷ್ಣಪ್ಪ ಬೈದು ಎಚ್ಚರಿಕೆ ನೀಡಿ ಕಳಿಸಿದ್ದ. ಇದರಿಂದ ಸಿಟ್ಟಾದ ಕಿರಣ್ ತನ್ನಿಬ್ಬರು ಸ್ನೇಹಿತರಾದ ಪ್ರತಾಪ್ ಹಾಗೂ ಗಣೇಶನ ಸಹಾಯ ಪಡೆದು ಕೊಲೆ ಮಾಡಿದ್ದಾರೆ.
ಕೃಷ್ಣಪ್ಪನನ್ನು ಕರೆಸಿಕೊಂಡ ಕಿರಣ್ ಮಧ್ಯರಾತ್ರಿವರೆಗೂ ಮದ್ಯ ಕುಡಿಸಿದ್ದ. ಬಳಿಕ ಕೊಲೆ ಮಾಡಿದ ಕಿರಣ್ ಹಾಗೂ ಸ್ನೇಹಿತರು ಕೃಷ್ಣಪ್ಪನ ಅಂಗಾಂಗಗಳನ್ನ ಕತ್ತರಿಸಿ ಎರಡು ಪ್ಲಾಸ್ಟಿಕ್ ಚೀಲಗಳಿಗೆ ತುಂಬಿಕೊಂಡಿದ್ದರು. ಬಳಿಕ ಗಣೇಶ ಹಾಗೂ ಕಿರಣ ಒಂದು, ಪ್ರತಾಪ ಇನ್ನೊಂದು ಶವದ ಚೀಲವನ್ನು ಹಿಡಿದು ಕೊರಟೆಗೆರೆ , ಚಿಕ್ಕರೂರು, ಬಾರಂಗಿ ಮೂಲಕ ಗೋಂದಿ ಬ್ರಿಡ್ಜ್ ಬಳಿ ಶವವನ್ನು ಎಸೆದಿದ್ದಾರೆ.
ಕಿರಣ್ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಕೃತ್ಯ ಬಯಲಾಗಿದೆ. ಸದ್ಯ ಎಫ್.ಐ.ಆರ್. ದಾಖಲಿಸಿ ಆರೋಪಿಗಳನ್ನು ಬಂಧಿಸಿದ ಶಿರಾಳಕೊಪ್ಪ ಠಾಣೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.






