ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎಸ್ಪಿ ಕಚೇರಿಯಲ್ಲೇ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ ಪೊಲೀಸ್ ಕಾನ್ಸ್ಟೆಬಲ್

Views: 540
ಹಾಸನ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕಾನ್ಸ್ ಸ್ಟೇಬಲ್ ಒಬ್ಬರು ಎಸ್ಪಿ ಕಚೇರಿ ಎದುರೇ ಪತ್ನಿಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಹಾಸನ ಹೊರವಲಯದ ಚನ್ನಪಟ್ಟಣದ ನಿವಾಸಿ ಮಮತಾ(38) ಕೊಲೆಯಾದ ಮಹಿಳೆ. ಕೆ.ಆರ್.ಪುರಂನ ಲೋಕನಾಥ್ನನ್ನು 17 ವರ್ಷದ ಹಿಂದೆ ಮಮತಾ ಪ್ರೀತಿಸಿ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಹಲವು ತಿಂಗಳುಗಳಿಂದ ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತಿತ್ತು. ಇದರಿಂದ ಮನನೊಂದಿದ್ದ ಪತ್ನಿ ಮಮತಾ ಪತಿ ಲೋಕನಾಥ್ ವಿರುದ್ಧ ಎಸ್ಪಿಗೆ ದೂರು ನೀಡಲು ಇಂದು ಬೆಳಗ್ಗೆ ಕಚೇರಿ ಬಳಿ ಹೋಗಿದ್ದರು.ಪತ್ನಿ ಎಸ್ಪಿ ಕಚೇರಿ ಬಳಿ ಬಂದಿದ್ದಾಳೆಂದು ಕೋಪಗೊಂಡ ಲೋಕನಾಥ್, ಕಚೇರಿ ಎದುರೇ ಪತ್ನಿಗೆ ಚಾಕುವಿನಿಂದ ಎದೆಗೆ ಇರಿದು ಪರಾರಿಯಾಗಿದ್ದನು.
ರಕ್ತದ ಮಡುವಿನಲ್ಲೇ ಎಸ್ಪಿ ಕಚೇರಿಗೆ ಒಳಗೆ ಹೋದ ಮಮತಾ ಕುಸಿದು ಬಿದ್ದಿದ್ದಾರೆ. ತಕ್ಷಣ ಕಚೇರಿಯಲ್ಲಿದ್ದ ಸಿಬ್ಬಂದಿ ಮಮತ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತ್ತಾದರೂ ಕೆಲ ಹೊತ್ತಿನಲ್ಲೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಪತ್ನಿಯನ್ನು ಕೊಂದು ಪರಾರಿಯಾಗಿದ್ದ ಆರೋಪಿ ಪತಿ ಲೋಕನಾಥ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಮಗಳ ಸಾವಿಗೆ ಅಳಿಯನೇ ಕಾರಣ. ಆತನಿಗೆ ಕಠಿಣ ಶಿಕ್ಷೆಯಾಗಬೇಕು. ಆಸ್ತಿ, ಸೈಟ್, ಹಣಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದ ಎಂದು ಮಾವ ಶಾಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಳಿಯ ಲೋಕನಾಥ ತಮ್ಮ ಮಗಳ ಮೇಲೆ ದೈಹಿಕ ಹಲ್ಲೆ ಮಾಡಿದ್ದಾನೆ. ಕಿರುಕುಳ ಕೊಟ್ಟರೂ ಸಹ ಮಗಳು ಸಹಿಸಿಕೊಂಡಿದ್ದಳು. ಇದೀಗ ಅವಳ ಸಾವು ನೋಡುವಂತಾಯಿತು ಎಂದು ಮಮತಾ ತಾಯಿ ಕಣ್ಣೀರು ಹಾಕಿದ್ದಾರೆ.
ಈ ಬಗ್ಗೆ ಎಸ್ಪಿ ಮೊಹಮದ್ ಸುಜಿತಾ ಮಾಧ್ಯಮದೊಂದಿಗೆ ಮಾತನಾಡಿ, ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಜಗಳವಾಗಿತ್ತು ಎಂದು ಗೊತ್ತಾಗಿದೆ. ಇಂದು ಬೆಳಗ್ಗೆ ಮಮತಾ ಅವರು ದೂರು ನೀಡಲು ಬಂದಿದ್ದಾಗ ಕಚೇರಿ ಎದುರು ಘಟನೆ ನಡೆದು ಹೋಗಿದೆ. ಪತಿ ಲೋಕನಾಥ್ನನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.






