ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮರಥೋತ್ಸವ ಸಂಪನ್ನ

Views: 0
ಬೈಂದೂರು: ಬೈಂದೂರು ಸಮೀಪದ ಉಪ್ಪುಂದದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಬ್ರಹ್ಮ ರಥೋತ್ಸವ ಮಂಗಳವಾರ ಸಾವಿರಾರು ಮಂದಿ ಭಕ್ತರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಬೈಂದೂರು ಹಾಗೂ ಉಪ್ಪುಂದ ಭಾಗದ ಜನ ’ಉಪ್ಪುಂದದ ಕೊಡಿ ಹಬ್ಬ’ ಎಂದು ಕರೆಯುವ ಸಂಪ್ರದಾಯವಿದೆ. ಮದುವೆ ಹಾಗೂ ಸಂತಾನ ಭಾಗ್ಯಕ್ಕಾಗಿ ಹರಕೆ ಹೊತ್ತುಕೊಳ್ಳುವವರು ಹಬ್ಬದ ದಿನದಂದು ಶ್ರೀ ದೇವಿಯ ದರ್ಶನ ಮಾಡಿ ಕಬ್ಬಿನ ಜಲ್ಲೆ (ಕೊಡಿ)ಯನ್ನು ಮನೆಗೆ ಒಯ್ಯುವ ಸಂಪ್ರದಾಯವು ಇಲ್ಲಿದೆ.
ಪ್ರತಿ ವರ್ಷದ ವೃಶ್ಚಿಕ ಮಾಸದಲ್ಲಿ ನಡೆಯುವ ಬ್ರಹ್ಮ ರಥೋತ್ಸವದ ಸಂಪ್ರದಾಯದಂತೆ ಮಂಗಳವಾರ ಕೂಡ ಶ್ರೀ ದೇವಿಗೆ ವೈಭವದ ರಥೋತ್ಸವ ನಡೆಯಿತು. ಬೆಳಿಗ್ಗೆ ಬ್ರಹ್ಮರಥದಲ್ಲಿ ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ರಥಬೀದಿಯಲ್ಲಿ ರಥವನ್ನು ಎಳೆಯುವ ಮೂಲಕ ಸಾಂಪ್ರದಾಯಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಂಜೆ ರಥೋತ್ಸವ ಅವರೋಹಣಾ ವಿಧಿಯನ್ನು ಪೂರೈಸಲಾಯಿತು.
ಸವಿತೃತೇಜ ಪಿ.ಡಿ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಮಹೇಶ್ ಕಂಬಿ ಬೈಂದೂರು ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿ ವರ್ಗದವರಿಂದ ಬಿಗಿ ಬಂದೋಬಸ್ತ್ ಏರ್ಪಡಿಸ ಲಾಗಿತ್ತು.
ಶ್ರೀ ದೇವಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ವಾರ್ಷಿಕ ಜಾತ್ರೆಯಂದು ಹರಾಜು ಹಾಕುವ ಸಂಪ್ರದಾಯದಂತೆ ಇಂದು ನಡೆದ ಸೀರೆ ಹರಾಜಿನಲ್ಲಿ ಭಾಗವಹಿಸಿದ ನೂರಾರು ಮಂದಿ ಶ್ರೀ ದೇವಿಯ ಪ್ರಸಾದ ರೂಪ ಎಂಬಂತೆ ಸೀರೆಗಳನ್ನು ಹರಾಜಿನಲ್ಲಿ ಪಡೆದುಕೊಂಡರು.
ಕರಾವಳಿ ತೀರ ಪ್ರದೇಶದ ತಟದಲ್ಲಿ ಇರುವ ಈ ದೇವಸ್ಥಾನಕ್ಕೆ ಮೀನುಗಾರರು ಹೆಚ್ಚು ನಡೆದುಕೊಳ್ಳುತ್ತಾರೆ. ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವೃತ್ತಿ ಬದುಕಿಗೆ ತೆರಳುವ ನಮ್ಮನ್ನು ಕಾಯುವವಳು ಅವಳೇ ಎನ್ನುವ ನಂಬಿಕೆ ಈ ಭಾಗದಲ್ಲಿ ಜನ ಜನಿತ. ಹಾಗಾಗಿ ಇಲ್ಲಿನ ಮೀನುಗಾರರ ಬಂಧುಗಳು ಎಲ್ಲಿಯೇ ನೆಲೆಸಿದ್ದರೂ ವಾರ್ಷಿಕ ಜಾತ್ರೆಗೆ ಬಂದು ದೇವಿಯ ದರ್ಶನ ಮಾಡುವ ಸಂಪ್ರದಾಯವನ್ನು ಹೆಚ್ಚಿನವರು ರೂಢಿಸಿಕೊಂಡಿದ್ದಾರೆ.
ಮಂಜುನಾಥ ಅಡಿಗ ಮಾರ್ಗದರ್ಶನದಲ್ಲಿ ಗೋಕರ್ಣದ ತಂತ್ರಿ ಗಣಪತಿ ಭಟ್ ಹೀರೆ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ನೆರವೇರಿತು.
ಈ ಸಂದರ್ಭದಲ್ಲಿ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ,ಪ್ರಧಾನ ಅರ್ಚಕ ವೇ| ಮೂ| ಪ್ರಕಾಶ ಉಡುಪ, ಶಂಕರನಾರಾಯಣ ಪುರಾಣಿಕ,ದೇವಸ್ಥಾನದ ಆಡಳಿತಾಧಿಕಾರಿ, ಬೈಂದೂರು ತಹಶೀಲ್ದಾರ್ ಪ್ರದೀಪ್ ಆರ್., ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಭೀಮಪ್ಪ ಎಚ್. ಬಿಲ್ದಾರ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಜಯರಾಮ ಶೆಟ್ಟಿ ಬಿಜೂರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ, ದೇವಸ್ಥಾನದ ಅರ್ಚಕ ಯು. ಸಂದೇಶ ಭಟ್, ಸಿಬಂದಿಯಾದ ಸುರೇಶ ಭಟ್, ಗಣೇಶ ದೇವಾಡಿಗ ಮತ್ತಿತರರು ಹಾಗೂ ಭಕ್ತರು ಉಪಸ್ಥಿತರಿದ್ದರು.