ತಾಳಿ ಕಟ್ಟಿದ ಗಂಡನನ್ನು ಬಿಟ್ಟು ಫೇಸ್ ಬುಕ್ ಗೆಳೆಯನ ನಂಬಿ ನೇಣಿಗೆ ಕೊರಳೊಡ್ಡಿದ ಮಹಿಳೆ

Views: 138
ಕನ್ನಡ ಕರಾವಳಿ ಸುದ್ದಿ: ಸೋಷಿಯಲ್ ಮೀಡಿಯಾ ಫೇಸ್ ಬುಕ್ ನಲ್ಲಿ ಪರಿಚಿತನಾದ ಯುವಕನನ್ನು ನಂಬಿ ತಾಳಿ ಕಟ್ಟಿದ ಗಂಡನನ್ನು ಬಿಟ್ಟು ಬಂದಿದ್ದ ಮಹಿಳೆಯೊಬ್ಬಳು ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ನಗರ ಶ್ರೀನಗರದಲ್ಲಿ ನಡೆದಿದೆ.
ಬೆಳಗಾವಿ ಮೂಲದ ಶ್ವೇತಾ ಗುದಗಾಪುರ (24) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಬೆಳಗಾವಿಯ ರಾಮದುರ್ಗ ಮೂಲದ ಶ್ವೇತಾ, 5 ವರ್ಷಗಳ ಹಿಂದೆ ರಾಮದುರ್ಗದ ವಿಶ್ವನಾಥ್ ಎಂಬುವವರನ್ನು ವಿವಾಹವಾಗಿದ್ದಳು. ಇನ್ ಸ್ಟಾಗ್ರಾಂ, ಫೇಸ್ ಬುಕ್ ನಲ್ಲಿ ಪರಿಚಯನಾಗಿದ್ದ ಧಾರವಾಡ ಮೂಲದ ಯುವಕನ ಮಾತು ಕೇಳಿ ಧಾರವಾಡಕ್ಕೆ ಬಂದಿದ್ದಾಳೆ.
ಗಂಡನನ್ನು ಬಿಟ್ಟು ಧಾರವಾಡದಲ್ಲಿ ವಾಸವಾಗಿದ್ದ ಶ್ವೇತಾ, ಪತಿಗೆ ವಿಚ್ಛೇದನ ನೋಟಿಸ್ ನೀಡಿದ್ದಳು. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಓದಿಕೊಳ್ಳೋದಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ಶ್ವೇತಾ, ಇದೀಗ ನೇಣಿಗೆ ಕೊರಳೊಡ್ಡಿದ್ದಾಳೆ.ಶ್ವೇತಾ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.