700 ಅಡಿ ಕಂದಕಕ್ಕೆ ಉರುಳಿ ಬಿದ್ದ ಕಾರು:8 ಮಂದಿ ದಾರುಣ ಅಂತ್ಯ
Views: 36
ಕನ್ನಡ ಕರಾವಳಿ ಸುದ್ದಿ:ಮಹಾರಾಷ್ಟ್ರ, ರಾಯಗಢದ ಅಂಬೆನಾಲಿ ಘಾಟ್ ಬಳಿ ಸ್ಕಾರ್ಪಿಯೋ ಎಸ್ಯುವಿ ಕಾರೊಂದು ಸುಮಾರು 700 ಅಡಿ ಕಂದಕಕ್ಕೆ ಉರುಳಿ ಬಿದ್ದಿದ್ದು, ಕಾರಿನೊಳಕ್ಕೆ ಎಂಟು ಮಂದಿ ಮೃತಪಟ್ಟಿದ್ದಾರೆ.
ಮಹಾಬಲೇಶ್ವರ ಹಾಗೂ ಪೋಲಾಪುರದ ನಡುವೆ ಇರುವ ಅಂಬೆನಾಲಿ ಘಾಟ್ ಬಳಿ ಪ್ರಯಾಣಿಸುವಾಗ ಈ ಅವಘಡ ಸಂಭವಿಸಿದೆ. ಕಾರಿನಲ್ಲಿ ಎಂದು ಮಂದಿ ಪ್ರಯಾಣಿಕರಿದ್ದು, ಎಲ್ಲರ ಪ್ರಾಣಪಕ್ಷಿ ಹಾರಿಹೋಗಿದೆ. ಕಂದಕಕ್ಕೆ ಬಿದ್ದಿರುವ ಮಾಹಿತಿ ತಿಳಿದ ತಕ್ಷಣ ರಕ್ಷಣಾ ತಂಡಗಳು ಹಾಗೂ ಸ್ಥಳೀಯ ಪೊಲೀಸರು ಆಗಮಿಸಿದ್ದು, ಮೃತದೇಹಗಳನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ.
ಅಂಶ್ ಸಮೀರ್ ಚೌಹಾಣ್, ರಿತೇಶ್ ರಾಜೇಂದ್ರ ಲೋಖಂಡೆ, ಸುಹಾಸ್ ಜಿತೇಂದ್ರ ಲೋಖಂಡೆ, ಉತ್ಕರ್ಷ್ ಆನಂದ್ ಶಿಂಗೈ ನಿಖಿಲ್ ಅಭಿಮನ್ಯು ಶಿಂಗೈ, ಮಹೇಶ್ ಅನಿಲ್ ಪವಾರ್, ಆದಿತ್ಯ ಅಶೋಕ್ ಸಾಳುಂಖೆ, ರಾಜೇಶ್ ಅಶೋಕ್ ಕಾಟ್ಕರ್ ಮೃತರು. ಇವರೆಲ್ಲವೂ ಸತಾರಾ ಜಿಲ್ಲೆಯವರಾಗಿದ್ದು, ೨೦-೩೦ ವಯಸ್ಸಿನ ಒಳಗಿನವರೆಂದು ಅಂದಾಜಿಸಲಾಗಿದೆ.
ಈ ಅಂಬೆನಾಲಿ ಘಾಟಿಯನ್ನು ಅಪಘಾತಗಳ ಹಾಟ್ಸ್ಪಾಟ್ ಎಂದೇ ಹೇಳಲಾಗುತ್ತದೆ. ಇಲ್ಲಿ ಸಾಕಷ್ಟು ಭೀಕರ ಅವಘಡಗಳು ಸಂಭವಿಸಿದ್ದು, ಈ ಘಾಟ್ ಸುತ್ತಮುತ್ತ ಬರುವಾಗ ಡ್ರೈವರ್ಗಳು ಇನ್ನಷ್ಟು ಅಲರ್ಟ್ ಆಗುತ್ತಾರೆ. ದಪೋಲಿಯಿಂದ ಸತಾರಾಗೆ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕಮರಿಗೆ ಬಿದ್ದಿದೆ. ಅತಿಯಾದ ಆಳಕ್ಕೆ ಬಿದ್ದ ಕಾರಣ ಒಂದು ಜೀವವೂ ಉಳಿದಿಲ್ಲ. ಸದ್ಯಕ್ಕೆ ಮೃತದೇಹಗಳಿಗಾಗಿ ಶೋಧ ನಡೆಯುತ್ತಿದೆ.






