ಕಾಲೇಜಿಗೆ ಬಂದ ತಂದೆಯಿಂದಲೇ ಮಗಳ ಮೇಲೆ ಚಾಕು ಇರಿತ!
Views: 57
ಕನ್ನಡ ಕರಾವಳಿ ಸುದ್ದಿ: ರಾಜಾನುಕುಂಟೆಯ ಎಸ್ ವಿಐಟಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿ ಲಕ್ಷ್ಮೀ ದುರ್ಗಾ ಅವರ ಮೇಲೆ ತಂದೆಯೇ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ
ಕೌಟುಂಬಿಕ ಕಲಹ ಹಾಗೂ ಮಗಳ ಮದುವೆ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ರಾಜಾನುಕುಂಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಜುಲೈ 25ರಂದು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ನಾಗೇಂದ್ರ ಎನ್ನುವರು ಮಗಳನ್ನು ಭೇಟಿಯಾಗಬೇಕು ಎಂದು ಹೇಳಿ ಕಾಲೇಜಿನ ಕಚೇರಿ ಭಾಗಕ್ಕೆ ಪ್ರವೇಶಿಸಿದ್ದಾನೆ. ಬಳಿಕ ಅಲ್ಲೇ ಇದ್ದ ಲಕ್ಷ್ಮೀ ದುರ್ಗಾ ಅವರ ಮೇಲೆ ಹೊಟ್ಟೆ, ಎದೆ ಮತ್ತು ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮಗಳ ಮದುವೆ ಸಂಬಂಧವಾಗಿ ವರನ ಕಡೆಯಿಂದ ಹೆಚ್ಚಿನ ಹಣ ಹಾಗೂ ಮಗಳ ಮಾಸಿಕ ಸಂಬಳವನ್ನು ತನಗೇ ಕೊಡಬೇಕು ಎಂದು ಆರೋಪಿ ನಾಗೇಂದ್ರ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ಇದಕ್ಕೆ ಮಗಳು ಹಾಗೂ ಪತ್ನಿ ವಿರೋಧ ವ್ಯಕ್ತಪಡಿಸಿದ್ದರಿಂದ ಕುಟುಂಬದಲ್ಲಿ ತೀವ್ರ ಕಲಹ ಉಂಟಾಗಿತ್ತು.ಇದೇ ವೈಮನಸ್ಸಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.






