25 ವರ್ಷಗಳ ಬಳಿಕ ಉಡುಪಿ ರೈಲು ನಿಲ್ದಾಣ ಅಭಿವೃದ್ಧಿಗೆ ಹೊಸ ವರ್ಷದ ಉಡುಗೊರೆ ಕೊಟ್ಟ ಕೇಂದ್ರ ಸರ್ಕಾರ

Views: 60
ಉಡುಪಿ, ಹೊಸವರ್ಷದ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ಕರ್ನಾಟಕದ ಕರಾವಳಿ ಭಾಗದ ಉಡುಪಿ ಜಿಲ್ಲೆಯ ಜನರಿಗೆ ಕೊಡುಗೆಯೊಂದನ್ನು ನೀಡಿದೆ. ಇದರಿಂದಾಗಿ 25 ವರ್ಷಗಳ ಬಳಿಕ ಉಡುಪಿ ಜಿಲ್ಲೆಯ ರೈಲು ನಿಲ್ದಾಣ ಅಭಿವೃದ್ಧಿಯಾಗಲಿದೆ.
ಭಾರತೀಯ ರೈಲ್ವೇ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗಾಗಿ ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’ಯನ್ನು ಘೋಷಣೆ ಮಾಡಿದೆ. ಈ ಯೋಜನೆಗೆ ಉಡುಪಿ ರೈಲು ನಿಲ್ದಾಣವನ್ನು ಸೇರಿಸಲಾಗಿದೆ. ಈ ರೈಲು ನಿಲ್ದಾಣ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್ಸಿಎಲ್) ವ್ಯಾಪ್ತಿಗೆ ಒಳಪಟ್ಟಿದೆ.
ಉಡುಪಿ-ಚಿಕ್ಕಮಗಳೂರು ಸಂಸದೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕರು ಸಲ್ಲಿಕೆ ಮಾಡಿದ್ದ ಪ್ರಸ್ತಾವನೆಗೆ ಕೇಂದ್ರ ರೈಲ್ವೆ ಸಚಿವರು ಒಪ್ಪಿಗೆ ನೀಡಿದ್ದಾರೆ. ಯೋಜನೆಗೆ ಉಡುಪಿ ರೈಲು ನಿಲ್ದಾಣ ಸೇರಿಸಿಕೊಳ್ಳುವಂತೆ ಕೆಆರ್ಸಿಎಲ್ಗೆ ಇಲಾಖೆ ಸೂಚನೆ ನೀಡಿದೆ.
ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮದ ಹಬ್ ಆಗಿರುವ ಉಡುಪಿಯ ರೈಲು ನಿಲ್ದಾಣ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಗೊಂಡಿಲ್ಲ. ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’ಯನ್ನು ಘೋಷಣೆ ಮಾಡಿದಾಗ ಕರ್ನಾಟಕದಲ್ಲಿ ಉಡುಪಿಯನ್ನು ಸೇರಿಸಿರಲಿಲ್ಲ. ಆದ್ದರಿಂದ ಈಗ ವಿಶೇಷ ಮನವಿ ಮೂಲಕ ನಿಲ್ದಾಣವನ್ನು ಯೋಜನೆಗೆ ಸೇರಿಸಲಾಗಿದೆ.
ಬಜೆಟ್ನಲ್ಲಿ ಘೋಷಣೆ; ಕೇಂದ್ರ ಸರ್ಕಾರ 2023-24ನೇ ಸಾಲಿನ ಬಜೆಟ್ನಲ್ಲಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗಾಗಿ ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’ಯನ್ನು ಘೋಷಣೆ ಮಾಡಿತು. ಮೊದಲ ಹಂತದಲ್ಲಿ ಈ ಯೋಜನೆಯಲ್ಲಿ ಉನ್ನತೀಕರಣ/ ಆಧುನೀಕರಣಕ್ಕಾಗಿ 1,275 ನಿಲ್ದಾಣಗಳನ್ನು ಗುರುತಿಸಲಾಯಿತು. ಆದರೆ ಕೆಆರ್ಸಿಎಲ್ ವ್ಯಾಪ್ತಿಯ ಯಾವುದೇ ನಿಲ್ದಾಣ ಸೇರಿಸಿರಲಿಲ್ಲ.
ಮಹಾರಾಷ್ಟ್ರ, ಗೋವಾ, ಕರ್ನಾಟಕದಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ತನ್ನ ಜಾಲವನ್ನು ಹೊಂದಿದೆ. 1998ರಲ್ಲಿ ಕೆಆರ್ಸಿಎಲ್ ರೈಲು ಸಂಚಾರವನ್ನು ಆರಂಭಿಸಿದರೂ ಸಹ ಉಡುಪಿ ಸೇರಿದಂತೆ ಹಲವು ನಿಲ್ದಾಣಗಳು ಅಭಿವೃದ್ಧಿಗೊಂಡಿಲ್ಲ.
ಕೆಆರ್ಸಿಎಲ್ ಕಾರವಾರ ಪ್ರಾದೇಶಿಕ ಕಛೇರಿ ಅಮೃತ್ ಭಾರತ್ ಸ್ಟೇಷನ್ ಯೋಜನೆಗೆ 15 ನಿಲ್ದಾಣಗಳನ್ನು ಸೇರಿಸಿಕೊಳ್ಳುವಂತೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಇದರಲ್ಲಿ ಕೆಲವು ದಿನಗಳ ಹಿಂದೆ ಮಡಗಾಂವ್ ನಿಲ್ದಾಣ ಯೋಜನೆಗೆ ಸೇರಿತ್ತು. ಈಗ ಉಡುಪಿ ನಿಲ್ದಾಣವನ್ನು ಆಯ್ಕೆ ಮಾಡಲಾಗಿದೆ.
ಉನ್ನತೀಕರಣ/ ಆಧುನೀಕರಣ ಯೋಜನೆಯಡಿ ಉಡುಪಿ ರೈಲು ನಿಲ್ದಾಣದ ಪ್ಲಾಟ್ ಫಾರಂ ಅಭಿವೃದ್ಧಿಗೊಳಿಸಲಾಗುತ್ತದೆ. ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತದೆ. ರೈಲು ನಿಲ್ದಾಣದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುತ್ತದೆ. ಕೆಆರ್ಸಿಎಲ್ ಯಾವ ಕಾಮಗಾರಿ ಕೈಗೊಳ್ಳಬೇಕು ಎಂದು ವಿವರವಾದ ಯೋಜನಾ ವರದಿ ತಯಾರು ಮಾಡಿ ಸಲ್ಲಿಕೆ ಮಾಡಲಿದೆ.
ಸದ್ಯ ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’ಗೆ ಉಡುಪಿ ರೈಲು ನಿಲ್ದಾಣವನ್ನು ಸೇರಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಇನ್ನೂ ಕೆಲವು ಕೆಲಸಗಳು ಪೂರ್ಣಗೊಂಡು, ಹಣ ಬಿಡುಗಡೆಯಾಗಿ ಅಧಿಕೃತವಾಗಿ ಕಾಮಗಾರಿ ಆರಂಭಗೊಳ್ಳಲು ಸುಮಾರು 8 ತಿಂಗಳು ಬೇಕು ಎಂದು ಅಂದಾಜಿಸಲಾಗಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಫೇಸ್ಬುಕ್ ಪೋಸ್ಟ್ ಹಾಕಿದ್ದು, ‘ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಉಡುಪಿಯ ರೈಲ್ವೆ ನಿಲ್ದಾಣವನ್ನು ಆಯ್ಕೆ ಮಾಡಿರುವ ಸನ್ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀ ಹಾಗೂ ರೈಲ್ವೇ ಖಾತೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದಗಳು. ಈ ಯೋಜನೆಯ ಮೂಲಕ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಮತ್ತಷ್ಟು ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಪುನರ್ ಅಭಿವೃದ್ಧಿ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ.
ಭಾರತೀಯ ರೈಲ್ವೆಯ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ನಿಲ್ದಾಣಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತದೆ. ನಿಲ್ದಾಣದ ಪ್ರವೇಶ, ಸಂಚಾರ ಪ್ರದೇಶಗಳು, ಕಾಯುವ ಹಾಲ್ಗಳು, ಶೌಚಾಲಯಗಳು, ಅಗತ್ಯಕ್ಕೆ ತಕ್ಕಂತೆ ಲಿಫ್ಟ್/ ಎಸ್ಕಲೇಟರ್ಗಳು, ಸ್ವಚ್ಛತೆ, ಉಚಿತ ವೈ-ಫೈ, ಸ್ಥಳೀಯ ಉತ್ಪನ್ನಗಳಿಗೆ ಕಿಯೋಸ್ಕ್ಗಳಂತಹ ಸೌಕರ್ಯಗಳನ್ನು ಒದಗಿಸಲಾಗುತ್ತದೆ.






