ರಿಯಾಲಿಟಿ ಶೋ ʻಹಳ್ಳಿ ಹೈದ ಪ್ಯಾಟೆಗೆ ಬಂದ’ ಖ್ಯಾತಿಯ ಬಾವತೀಶ್ ಅಪಘಾತಕ್ಕೆ ಬಲಿ
Views: 85
ಕನ್ನಡ ಕರಾವಳಿ ಸುದ್ದಿ: ರಿಯಾಲಿಟಿ ಶೋ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್ 3ರ ಮೂಲಕ ಫೇಮಸ್ ಅಗಿದ್ದ ಬಾವತೀಶ್ (28) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೋಳಿಕೆರೆ ಸಮೀಪ ಸಂಭವಿಸಿದ ಈ ದುರಂತದಲ್ಲಿ ಬಾವತೀಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಹಳಿಯಾಳ ತಾಲೂಕಿನ ವಾಡಗರಡೊಳ್ಳಿ ಗ್ರಾಮದ ನಿವಾಸಿಯಾದ ಬಾವತೀಶ್, ಮಂಗಳವಾರ (ಮಾ.24) ಮಧ್ಯಾಹ್ನ ತಮ್ಮ ಬೈಕ್ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಕೆಎಸ್ಆರ್ಟಿಸಿ (KSRTC) ಬಸ್ಗೆ ಬಾವತೀಶ್ ಇದ್ದ ಬೈಕ್ ಹಿಂಬದಿಯಿಂದ ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಬಾವತೀಶ್ ಅವರ ಬೈಕ್ಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಬಾವತೀಶ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸುಟ್ಟ ಗಾಯಗಳು ಹಾಗೂ ತಲೆಗೆ ಬಿದ್ದ ಬಲವಾದ ಪೆಟ್ಟು ಸಾವಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಸ್ಟಾರ್ ಸುವರ್ಣ ವಾಹಿನಿಯ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದ ಬಾವತೀಶ್, ತಮ್ಮ ಮುಗ್ಧ ನಗು, ಅಪ್ಪಟ ಹಳ್ಳಿ ಸೊಗಡಿನ ಮಾತು ಹಾಗೂ ವಿಭಿನ್ನ ಮ್ಯಾನರಿಸಂನಿಂದಲೇ ತೀರ್ಪುಗಾರರ ಮತ್ತು ಅಭಿಮಾನಿಗಳ ನೆಚ್ಚಿನ ಸ್ಪರ್ಧಿಯಾಗಿದ್ದರು. ಹಳ್ಳಿಯ ಪ್ರತಿಭೆಯೊಂದು ನಗರದ ಸಂಸ್ಕೃತಿಗೆ ಹೊಂದಿಕೊಳ್ಳುವ ಸವಾಲನ್ನು ಎದುರಿಸುವ ಈ ಶೋನಲ್ಲಿ ಬಾವತೀಶ್ ತೋರುತ್ತಿದ್ದ ಚತುರತೆ ಮತ್ತು ಅವರ ಕಾಮಿಡಿ ಸೆನ್ಸ್ ಪ್ರೇಕ್ಷಕರನ್ನು ಅಪಾರವಾಗಿ ಸೆಳೆದಿತ್ತು.






