ರಸ್ತೆ ಅಪಘಾತದಲ್ಲಿ ಕನ್ನಡದ ಖ್ಯಾತ ಕಿರುತೆರೆ ನಟಿ ಪವಿತ್ರಾ ಜಯರಾಂ ದುರ್ಮರಣ

Views: 373
ಮಂಡ್ಯ ಮೂಲದ ಕನ್ನಡ ಕಿರುತೆರೆ ನಟಿ ಪವಿತ್ರಾ ಜಯರಾಂ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ಅಪಘಾತ ಸಂಭವಿಸಿದ್ದು ಗಂಭೀರವಾಗಿ ಗಾಯಗೊಂಡಿದ್ದ ನಟಿ ಕೊನೆಯುಸಿರೆಳೆದಿದ್ದಾರೆ. ಮಂಡ್ಯ ಮೂಲಕ ಪವಿತ್ರಾ ಇತ್ತೀಚೆಗೆ ತೆಲುಗು ಕಿರುತೆರೆಯಲ್ಲಿ ಹೆಚ್ಚು ಗುರುತಿಸಿ ಕೊಂಡಿದ್ದರು.
ಪವಿತ್ರಾ ಪ್ರಯಾಣಿಸುತ್ತಿದ್ದ ಕಾರು ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ‘ತ್ರಿನಯನಿ’ ಧಾರವಾಹಿಯಲ್ಲಿ ನಟಿಸಿ ಅಲ್ಲಿನ ವೀಕ್ಷಕರ ಮನಗೆದ್ದಿದ್ದರು. ಕನ್ನಡದಲ್ಲಿ ‘ರೋಬೋ ಫ್ಯಾಮಿಲಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಆಕೆ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರಾಗಿದ್ದರು.
‘ಜೋಕಾಲಿ’, ‘ನೀಲಿ’, ‘ರಾಧಾರಮಣ’ ಎನ್ನುವ ಧಾರಾವಾಹಿಗಳಲ್ಲಿ ಕೂಡ ಪವಿತ್ರಾ ಜಯರಾಮ್ ನಟಿಸಿದ್ದರು. ಪವಿತ್ರಾ ದುರಂತ ಸಾವಿನ ವಿಚಾರ ಕಿರುತೆರೆ ಲೋಕಕ್ಕೆ ಆಘಾತ ತಂದಿದೆ. ಮೆಹಬೂಬ್ ನಗರದ ಭೂತ್ಪುರ್ ವ್ಯಾಪ್ತಿಯ ಶೇರಿಪಲ್ಲಿ ಎನ್ನುವ ಗ್ರಾಮದ ಬಳಿ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಮಂಡ್ಯದ ತಮ್ಮ ಹುಟ್ಟೂರಿಗೆ ಬಂದು ಮರಳಿ ವಾಪಸ್ ಹೈದರಾಬಾದ್ಗೆ ಹೋಗುವ ವೇಳೆ ರಾತ್ರಿ ಈ ಘಟನೆ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಬಳಿಕ ಬಸ್ಗೆ ಗುದ್ದಿದೆ.
ತೆಲುಗು ಕಿರುತೆರೆಯ ‘ತ್ರಿನಯನಿ’ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ನಲ್ಲಿ ಪವಿತ್ರಾ ಜಯರಾಮ್ ನಟಿಸುತ್ತಿದ್ದರು. ಆಕೆಯ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅಪಘಾತದಲ್ಲಿ ಆಕೆಯ ಸಂಬಂಧಿ ಅಪೇಕ್ಷಾ, ಚಾಲಕ ಶ್ರೀಕಾಂತ್, ಸಹನಟ ಚಂದ್ರಕಾಂತ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಪೊಲೀಸರು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣದ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ಧಾರೆ.






