ಬೇರೆ ಯುವತಿಯನ್ನು ಪ್ರೀತಿಸಿ ಮದುವೆಯಾಗಲು ಪತ್ನಿಗೆ ತಾನೇ ಇಂಜೆಕ್ಷನ್ ನೀಡಿದ್ದಾಗಿ ಒಪ್ಪಿಕೊಂಡ ವೈದ್ಯ
Views: 150
ಕನ್ನಡ ಕರಾವಳಿ ಸುದ್ದಿ: ವೈದ್ಯೆ ಕೃತಿಕಾ ಕೊಲೆ ಪ್ರಕರಣದಲ್ಲಿ ಆರೋಪಿ ಮಹೇಂದ್ರ ರೆಡ್ಡಿ ತನ್ನ ಪತ್ನಿಗೆ ಅನಸ್ತೇಷಿಯಾ ಕೊಟ್ಟಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿರುವ ವೈದ್ಯ, ಕೃತಿಕಾ ಪೋಷಕರು ತನಗೆ ಮೋಸ ಮಾಡಿ ಮದುವೆ ಮಾಡಿಸಿದರು ಎಂದು ಆರೋಪಿಸಿದ್ದಾನೆ. ಇದರಿಂದ ರಿವೆಂಜ್ ತೀರಿಸಿಕೊಳ್ಳಲು ಹತ್ಯೆಗೆ ಯೋಜನೆ ರೂಪಿಸಿದ್ದೆ ಎಂದು ಒಪ್ಪಿಕೊಂಡಿದ್ದಾನೆ.
ಕೃತಿಕಾ ಮತ್ತು ಮಹೇಂದ್ರ ರೆಡ್ಡಿ ದಂಪತಿಗಳು ಅದ್ದೂರಿ ಮದುವೆಯೊಂದಿಗೆ ಜೀವನ ಆರಂಭಿಸಿದ್ದರು. ಆದರೆ ಮದುವೆಯ ನಂತರ ಮಹೇಂದ್ರಗೆ ಕೃತಿಕಾ ಆರೋಗ್ಯ ಸಮಸ್ಯೆಯ ಬಗ್ಗೆ ಗೊತ್ತಾಯಿತು. ಅವಳು ಏನೇ ತಿಂದರೂ ಅಥವಾ ಕುಡಿದರೂ ವಾಂತಿ ಮಾಡುತ್ತಿದ್ದಳು. ಎಂದು ಅವನು ಹೇಳಿಕೊಂಡಿದ್ದಾನೆ. ಪಾರ್ಟಿ ಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಇದು ಮುಜುಗರಕ್ಕೆ ಕಾರಣವಾಗುತ್ತಿತ್ತು. ಸ್ನೇಹಿತರು ತಮಾಷೆಯಾಗಿ ‘ನಿನಗೆ ರೋಗದ ಹೆಂಡತಿ ಸಿಕ್ಕಿದ್ದಾಳೆ’ ಎಂದು ಹೀಯಾಳಿಸುತ್ತಿದ್ದರಂತೆ. ಇದರಿಂದ ಮಹೇಂದ್ರನಲ್ಲಿ ಪತ್ನಿಯ ಬಗ್ಗೆ ಬೇಸರ ಮತ್ತು ಕೋಪ ಉಂಟಾಯಿತು. ಅವನು ತನ್ನ ಹೇಳಿಕೆಯಲ್ಲಿ, ತಾನು ಒಂದೊಳ್ಳೆ ಜೀವನದ ಕನಸು ಕಂಡಿದ್ದೆ. ಆದರೆ ರೋಗಿಷ್ಟೆಯೊಬ್ಬಳನ್ನು ಮದುವೆ ಮಾಡಿಸಿದರು ಎಂದು ಆರೋಪಿಸಿದ್ದಾನೆ.
ಮಹೇಂದ್ರ ರೆಡ್ಡಿ, ಕೃತಿಕಾ ಪೋಷಕರ ಮೇಲೆ ತೀವ್ರ ಆರೋಪ ಮಾಡಿದ್ದಾನೆ. ಅವರು ಅವಳ ಆರೋಗ್ಯ ಸಮಸ್ಯೆಯನ್ನು ಮುಚ್ಚಿಟ್ಟು ಮದುವೆ ಮಾಡಿಸಿದರು ಎಂದು ಹೇಳಿದ್ದಾನೆ. ಅದ್ದೂರಿ ಖರ್ಚು ಮಾಡಿ ಮದುವೆ ಮಾಡಿಸಿದ್ದರೂ, ಸತ್ಯ ಗೊತ್ತಾಗಬೇಕಿತ್ತು. ಇದು ಸಂಪೂರ್ಣ ವಂಚನೆ ಎಂದು ಅವನು ಹೇಳಿ ಕೊಂಡಿದ್ದಾನೆ. ಇದರಿಂದಾಗಿ ಅವನು ಪತ್ನಿಯಿಂದ ದೂರವಾಗಲು ನಿರ್ಧರಿಸಿದ್ದನಂತೆ. ಮತ್ತೊಬ್ಬ ಯುವತಿಯನ್ನು ಪ್ರೀತಿಸಿ, ಕೃತಿಕಾ ಸಾವನ್ನಪ್ಪಿದರೆ ಆಕೆಯ ಜತೆ ಜೀವನ ನಡೆಸ ಬಹುದು ಎಂಬ ಉದ್ದೇಶದಿಂದ ಹತ್ಯೆಗೆ ಪ್ಲಾನ್ ರೂಪಿಸಿದ್ದೆ ಎಂದು ಒಪ್ಪಿಕೊಂಡಿದ್ದಾನೆ.
ಈ ಪ್ರಕರಣದ ಆರಂಭದಲ್ಲಿ ಮಹೇಂದ್ರ ಅನಸ್ತೇಷಿಯಾ ಕೊಟ್ಟಿದ್ದು ತಾನಲ್ಲ ಎಂಬ ಹೇಳಿಕೆಗೆ ಪೊಲೀಸರ ವಿಭಿನ್ನ ವಿಚಾರಣಾ ತಂತ್ರಗಳಿಂದ ಅವನು ನಿಜವನ್ನು ಬಾಯ್ದಿಟ್ಟಿದ್ದಾನೆ. ತನ್ನದೇನೂ ತಪ್ಪಿಲ್ಲ ಎಂದಿದ್ದವನು ಈಗ ಅನಸ್ತೇಷಿಯಾ ಕೊಟ್ಟಿದ್ದು ನಾನೇ ಎಂದು ವಿಡಿಯೋ ಮತ್ತು ಲಿಖಿತ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಇದನ್ನು ಅಧಿಕೃತವಾಗಿ ದಾಖಲಿಸಿದ್ದಾರೆ.
ವರ್ಷದಿಂದಲೇ ಕೊಲೆಗೆ ಸ್ಕೆಚ್: ಸೌಜನ್ಯ ಮಹೇಂದ್ರ ವಿರುದ್ಧ ಕೃತಿಕಾ ತಾಯಿ ಸೌಜನ್ಯ ಗಂಭೀರ ಆರೋಪ ಮಾಡಿದ್ದು, ನನ್ನ ಮಗಳನ್ನು ಕಳೆದ ವರ್ಷದ ಅಕ್ಟೋಬರ್ ನಿಂದಲೇ ಕೊಲೆ ಮಾಡಲು ಮಹೇಂದ್ರ ರೆಡ್ಡಿ ಪ್ರಯತ್ನಿಸುತ್ತಿದ್ದು, ನಮ್ಮ ಗಮನಕ್ಕೆ ಬಂದಿರಲಿಲ್ಲ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆಯಾದ ದಿನದಿಂದಲೂ ಮಹೇಂದ್ರ ರೆಡ್ಡಿಯು ನಮ್ಮ ಕುಟುಂಬದ ವರಿಗೆ ಸಣ್ಣ ಅನುಮಾನ ಬಾರದಂತೆ ನಡೆದು ಕೊಂಡಿದ್ದ. 2024 ಅಕ್ಟೋಬರ್ನಿಂದಲೇ ಮಗಳ ಹತ್ಯೆಗೆ ಪ್ಲಾನ್ ಮಾಡುತ್ತಿದ್ದ. ನಮ್ಮ ಮಗಳು ಆಗಾಗ ಮನೆಗೆ ಬರುತ್ತಿದ್ದಳು. ದಿನ ಬಿಟ್ಟು ದಿನ ಅಳಿಯ ರಾತ್ರಿ ಪಾಳಿಯಲ್ಲಿ ಕೆಲಸ ಎನ್ನುತ್ತಿದ್ದ, ಹಲವು ದಿನಗಳ ಕಾಲ ನಮಗೆ ತಿಳಿಯದಂತೆ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾನೆ. ಏಪ್ರಿಲ್ 21 ರಂದು ಮಗಳಿಗೆ ಅವರ ಮನೆಯಲ್ಲಿ ಚಿಕಿತ್ಸೆ ನೀಡಿದ್ದ ಎಂದು ತಿಳಿಸಿದರು. ಏಪ್ರಿಲ್ 22ರಂದು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದಾನೆ. ಮನೆಗೆ ಬರುವಾಗ ಐವಿ ಡ್ರಿಪ್ಸ್ ಹಾಕಿಕೊಂಡು ಬಂದಿದ್ದ. ಬಳಿಕ ಏಪ್ರಿಲ್ 23 ರಂದು ನಾನು ನನ್ನ ಮಗಳು ಜತೆಯಲ್ಲಿ ಊಟ ಮಾಡಿ ದ್ದೆವು. ನಂತರ ರಾತ್ರಿ 9:30 ಕ್ಕೆ ರೂಮ್ಗೆ ಹೋಗಿದ್ದರು.
ಮರುದಿನ ಬೆಳಗ್ಗೆ 7:30 ಕ್ಕೆ ಅಳಿಯ ರೂಮ್ನಿಂದ ಕಿರುಚಿಕೊಂಡಿದ್ದ. ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟ ವಿಚಾರ ಗೊತ್ತಾಯಿತು ಎಂದು ವಿವರಿಸಿದರು. ವೈದ್ಯನಾಗಿರುವ ನಾನು ಮರಣೋತ್ತರ ಪರೀಕ್ಷೆಯನ್ನು ನೋಡಬೇಕು ಎಂದು ಮಹೇಂದ್ರ ರೆಡ್ಡಿ ಹಠ ಹಿಡಿದಿದ್ದ. ಆದರೆ ವರದಿ ಬಂದ ಬಳಿಕವಷ್ಟೇ ನಮಗೆ ಈ ವಿಚಾರ ಗೊತ್ತಾಗಿತ್ತು. ಅವನ್ನೊಬ್ಬ ಗೋಮುಖ ವ್ಯಾಘ್ರ ಎಂದು ತಾಯಿ ಆಕ್ರೋಶ ವ್ಯಕ್ತಪಡಿಸಿದರು.






