ರಾಜಕೀಯ

ಬಾರ್ಕೂರಿನ ಗತವೈಭವ ಮತ್ತೆ ಮರುಕಳಿಸಲು ಕ್ರಮ: ಸಚಿವ ಎಚ್. ಕೆ. ಪಾಟೀಲ್

Views: 44

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಬಾರಕೂರಿನ ಐತಿಹಾಸಿಕ ಮಹತ್ವವುಳ್ಳ ಕೋಟೆ-ಕೊತ್ತಲ, ಗುಡಿ ಗೋಪುರ ಸೇರಿದಂತೆ ಇಲ್ಲಿನ ಗತವೈಭವವನ್ನು ಸಾರುವ ಆಸ್ತಿಗಳನ್ನು ಸಂರಕ್ಷಿಸಿ, ಅವುಗಳ ಮೂಲಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಪುನರುಜ್ಜಿವನಗೊಳಿಸಿ, ಇಲ್ಲಿನ ಭವ್ಯ ಪರಂಪರೆಯನ್ನು ಹಾಗೂ ಈ ನಾಡನ್ನು ಆಳಿದ ಅಳುಪರ ಆಡಳಿತ ವ್ಯವಸ್ಥೆ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಹೆಚ್‌.ಕೆ ಪಾಟೀಲ್ ಹೇಳಿದರು.

ಅವರು ಬ್ರಹ್ಮಾವರ ತಾಲೂಕು ಬಾರಕೂರು ಇಲ್ಲಿನ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿದರು.

ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಗತವೈಭವನ್ನು ತಿಳಿಸುವ ನಮ್ಮನಾಡಿನ ಇತಿಹಾಸ ಮರೆಯಾಗಿ ಹೋಗುತ್ತಿದ್ದು ಅತ್ಯಂತ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವಂತಹ, ಇತಿಹಾಸದ ಮಹತ್ವವನ್ನು ಸಾರುವಂತಹ ಪ್ರತೀ ಕಲ್ಲುಗಳನ್ನು ಸಂರಕ್ಷಿಸುವ ಕೆಲಸ ನಮ್ಮ ಆದ್ಯ ಕರ್ತವ್ಯವಾಗಿದೆ. ಇದರಲ್ಲಿ ವಿಫಲರಾಗಬಾರದು ಎಂದರು.

ಬಾರ್ಕೂರು ರಾಜ್ಯವನ್ನು ಅಳುಪರು ಧೀರ್ಘಾವಧಿ ಆಳಿದರು ಎಂಬುದೇ ಜಾಗತಿಕ ಇತಿಹಾಸ. ಇಷ್ಟು ದೊಡ್ಡ ಮಟ್ಟದಲ್ಲಿ ಆಳ್ವಿಕೆ ನಡೆಸಿರುವ ಅಳುಪರ ಆಡಳಿತ ವೈಖರಿ, ಯುವಪೀಳಿಗೆಗೆ ತಿಳಿಸಬೇಕಿದೆ. ಆಳ್ವಿಕೆಯ ಸಂದರ್ಭದಲ್ಲಿ ಜನರು ದಂಗೆ ಏಳದೇ, ಅಕ್ಕಪಕ್ಕದ ರಾಜ್ಯದ ರಾಜರು ಹೋರಾಟ ಮಾಡದೇ ಶಾಂತಿಯುತವಾಗಿ ಆಡಳಿತ ನಡೆಸಿದ ಇಂತಹ ವ್ಯವಸ್ಥೆಯನ್ನು ನೀಡಿರುವ ರಾಜರನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತ ಮನಸ್ಥಿತಿ ಪ್ರತಿಯೊಬ್ಬರಲ್ಲಿಯೂ ಇರಬೇಕು ಎಂದರು.

ಬಾರಕೂರಿನ ಐತಿಹಾಸಿಕ ಶ್ರೀಮಂತಿಕೆಯನ್ನು ಮರುಸೃಷ್ಟಿಸುವ ನಿಟ್ಟಿನಲ್ಲಿ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಅಧಿಕೃತ ಸಮಿತಿಯನ್ನು ರಚಿಸುವುದರೊಂದಿಗೆ ಬಾರಕೂರು ಇತಿಹಾಸವನ್ನು ಪುನರುಜ್ಜಿವನ ಗೊಳಿಸಲು ಅಗತ್ಯವಿರುವ ಯೋಜನಾ ವರದಿಯನ್ನು ಶೀಘ್ರವಾಗಿ ನೀಡುವಂತೆ ತಿಳಿಸಿದ ಅವರು, ಮೂಲಸ್ವರೂಪಕ್ಕೆ ಧಕ್ಕೆ ಆಗದಂತೆ ಬಾರಕೂರಿನ ಗತವೈಭವ ಮತ್ತೆ ವಿಜೃಂಭಿಸಲು ಕ್ರಮವಹಿಸಲಾಗುವುದು ಎಂದರು.

ಉತ್ತರ ಕರ್ನಾಟಕ ಭಾಗದಿಂದ ಪ್ರವಾಸ ಕೈಗೊಂಡು ಶಿರಸಿ, ಕೊಲ್ಲೂರು, ಉಡುಪಿ, ಹೊರನಾಡು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಧಾರ್ಮಿಕ ಪ್ರವಾಸವನ್ನು ಒಂದು ನಯಾ ಪೈಸೆ ಖರ್ಚಿಲ್ಲದೇ ಹೆಣ್ಣು ಮಕ್ಕಳು ಕೈಗೊಳ್ಳುತ್ತಿದ್ದಾರೆ. ಇದರಿಂದ ಅವರಲ್ಲಿ ಭಕ್ತಿ ಭಾವ ಕುದುರಿಸುವ ಪ್ರಯತ್ನವಾಗುತ್ತಿದೆ. ಇದಕ್ಕೆಲ್ಲಾ ಈ ಭಾಗದ ಜನರ ತ್ಯಾಗ, ಪ್ರಯತ್ನ, ಉತ್ತಮ ಮನಸ್ಥಿತಿಯನ್ನು ಹೊಂದಿರುವುದೇ ಕಾರಣ ಎಂದರು.

ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಗದೀಶ್ ಶೆಟ್ಟರ್, ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ  ಸುಧಾಕರ ಶೆಟ್ಟಿ, ನಾಯಕರಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಶಾಂತಾರಾಮ್ ಶೆಟ್ಟಿ, ಅಳುಪ ಮನೆತನದ ಆಕಾಶ್‌ರಾಜ್ ಜೈನ್‌ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button
error: Content is protected !!