ನಾಲ್ಕು ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ, ಕೊಲೆ: ಹೀನಕೃತ್ಯ ಖಂಡಿಸಿ ಪ್ರತಿಭಟನೆ

Views: 183
ರಾಮನಗರ: ನಾಲ್ಕು ವರ್ಷದ ಬಾಲಕಿಯನ್ನು ಅವರ ಸಂಬಂಧಿಯೇ ಅಪಹರಿಸಿ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಘಟನೆ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಯನ್ನು ಬೆಂಗಳೂರಿನ ಗೌರಿಪಾಳ್ಯದ ಇಮ್ರಾನ್ ಖಾನ್ ವಿರುದ್ಧ ಮಾಗಡಿ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಮಗುವಿನ ಕುಟುಂಬದ ಸಂಬಂಧಿಯಾದ ಆರೋಪಿ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಅದೇ ರೀತಿ ಜುಲೈ 20ಕ್ಕೆ ಬಂದಿದ್ದ ಆತ, ಕೊಲೆಯಾಗಿರುವ ಹೆಣ್ಣು ಮಗುವಿನ ಜೊತೆಗೆ ಮತ್ತೊಂದು ಮಗುವನ್ನು ಸಂಜೆ ಅಂಗಡಿಗೆ ಕರೆದೊಯ್ದು ಐಸ್ಕ್ರೀಂ ಕೊಡಿಸಿಕೊಂಡು ಬಂದಿದ್ದ. ನಂತರ, ಮತ್ತೆ ಹೆಣ್ಣು ಮಗುವನ್ನು ತನ್ನೊಂದಿಗೆ ಕರೆದೊಯ್ದಿದ್ದ, ಸಂಜೆ 7 ಗಂಟೆಯಾದರೂ ಮಗು ಮನೆಗೆ ಬಾರದಿದ್ದರಿಂದ ಗಾಬರಿಗೊಂಡ, ತಾಯಿ ಅಕ್ಕಪಕ್ಕ ಹುಡುಕಾಡಿದರು. ಕಡೆಗೆ, ಅಂಗಡಿಗೆ ಮಗು ಕರೆದೊಯ್ದಿದ್ದ ಆರೋಪಿಗೆ ಕರೆ ಮಾಡಿದಾಗ ಆತ, ‘ನನಗೇನೂ ಗೊತ್ತಿಲ್ಲ’ ಎಂದು ಕರೆ ಸ್ಥಗಿತಗೊಳಿಸಿ, ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಅನುಮಾನಗೊಂಡ ತಾಯಿ ಠಾಣೆಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡು ಮಗು ಹಾಗೂ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸುತ್ತಮುತ್ತ ಹುಡುಕಾಡಿದಾಗ ರಸ್ತೆ ಬದಿಯ ಬಂಡೆಯ ಬಳಿ ಬೆತ್ತಲೆ ಸ್ಥಿತಿಯಲ್ಲಿ ಮಗುವಿನ ಶವ ಪತ್ತೆಯಾಯಿತು. ನಂತರ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಸಹ ಬಂಧಿಸಲಾಯಿತು. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಶವ ಹಸ್ತಾಂತರಿಸಲಾಯಿತು ಎಂದು ತಿಳಿಸಿದರು.
ಮಗು ಮೇಲಿನ ಹೀನ ಕೃತ್ಯಕ್ಕೆ ಪಟ್ಟಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಮುಸ್ಲಿಂ ಸಮುದಾಯದವರು ಪಟ್ಟಣದಲ್ಲಿ ಮಂಗಳವಾರ ದೊಡ್ಡಮಟ್ಟದ ಪ್ರತಿಭಟನೆ ನಡೆಸಿದ್ದಾರೆ. ಮಹಿಳೆಯರು ಸೇರಿದಂತೆ ನೂರಾರು ಮಂದಿ ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ, ಇಲ್ಲದಿದ್ದರೆ ಎನ್ಕೌಂಟ್ ಮಾಡಿ ಎಂದು ಆಗ್ರಹಿಸಿದರು.






