ಗೃಹ ಜ್ಯೋತಿಗೆ ಜಾತಿ ಮಾಹಿತಿ ಕಡ್ಡಾಯವಲ್ಲ: ಜಾಲತಾಣದಲ್ಲಿ ಹರಿದಾಡುವ ವದಂತಿಗೆ ಸ್ಪಷ್ಟನೆ ನೀಡಿದ ಬೆಸ್ಕಾಂ
Views: 75
ಕನ್ನಡ ಕರಾವಳಿ ಸುದ್ದಿ: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ ಯೋಜನೆಯ ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಫಲಾನುಭವಿಯ ಪ್ರವರ್ಗ ಕುರಿತು ಕೇಳಿರುವ ಮಾಹಿತಿ ಕಡ್ಡಾಯವಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಬೆಸ್ಕಾಂನ ಸಿಬ್ಬಂದಿ ಹಾಗೂ ಮೀಟರ್ ರೀಡರ್ಗಳು ಸೇವಾ ಸಿಂಧು ಮೊಬೈಲ್ ಅಪ್ಲಿಕೇಷನ್ ಹಾಗೂ ಮುದ್ರಿತ ಘೋಷಣಾ ಪತ್ರದ ಮೂಲಕ ಮಾಹಿತಿಯನ್ನು ಗೃಹ ಫಲಾನುಭವಿಗಳ ಮನೆಗೆ ತೆರಳಿ ಕಲೆ ಹಾಕುತ್ತಿದ್ದು, ಫಲಾನುಭವಿಯ ಪ್ರವರ್ಗದ (ಜಾತಿ ಪ್ರಮಾಣಪತ್ರ) ಸಂಬಂಧಿಸಿದ ಮಾಹಿತಿ ಕೇವಲ ಐಚ್ಛಿಕವಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಫಲಾನುಭವಿಗಳ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಪ್ರಶ್ನೆಗೆ ಸಂಬಂಧಿಸಿದಂತೆ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ.
ಗೃಹ ಜ್ಯೋತಿ ಪರಿಶೀಲನೆ ಏಕೆ?
ಕರ್ನಾಟಕ ಸರ್ಕಾರವು ಅರ್ಹ ಫಲಾನುಭವಿಗಳಿಗೆ ಮಾತ್ರ ಉಚಿತ ವಿದ್ಯುತ್ ಸೌಲಭ್ಯ ತಲುಪಿಸುವ ಉದ್ದೇಶದಿಂದ ಗೃಹ ಜ್ಯೋತಿ ಯೋಜನೆಯನ್ನು ಜುಲೈ 1ರಿಂದ ಮತ್ತೊಮ್ಮೆ ಮರು ಪರಿಶೀಲನೆ ಮಾಡುತ್ತಿದೆ. ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ನಕಲಿ ದಾಖಲೆಗಳ ಬಳಕೆಯಾಗಿದೆಯೇ, ಮೃತಪಟ್ಟವರ ಹೆಸರಿನಲ್ಲಿ ಇನ್ನು ಕೂಡ ಉಚಿತ ವಿದ್ಯುತ್ ಸೌಲಭ್ಯ ಪಡೆಯಲಾಗುತ್ತಿದೆಯೇ ಮತ್ತು ಒಂದೇ ಕುಟುಂಬದವರು ಬೇರೆ ಬೇರೆ ಮೀಟರ್ಗಳ ಹೆಸರಿನಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಇಂಧನ ಇಲಾಖೆ ತಪಾಸಣೆ ನಡೆಸುತ್ತಿದೆ. ಇದರೊಂದಿಗೆ ಬಾಡಿಗೆದಾರರು ಮತ್ತು ಸ್ವಂತ ಮನೆ ಮಾಲೀಕರ ಖಾತೆಗಳ ಮರು ಜೋಡಣೆ ಹಾಗೂ ಮಾಸಿಕ ವಿದ್ಯುತ್ ಬಳಕೆಯ ಸರಾಸರಿ ಮಿತಿಯನ್ನು ನಿಯಮಾನುಸಾರ ಮರು ಮೌಲ್ಯಮಾಪನ ಮಾಡಲು ಸರ್ಕಾರ ನಿರ್ಧರಿಸಿದ್ದು, ಅರ್ಹ ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಕೇವಲ ದುರುಪಯೋಗ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.






