ಕರಾವಳಿ
ಗಂಗೊಳ್ಳಿ: ದನಗಳನ್ನು ಓಡಿಸಿಕೊಂಡು ಹೋಗುವಾಗ ಬಾವಿಗೆ ಬಿದ್ದು ಸಾವು

Views: 155
ಗಂಗೊಳ್ಳಿ: ಇಲ್ಲಿನ ಗುಜ್ಜಾಡಿ ಸಮೀಪ ಮನೆಯ ವಠಾರದಲ್ಲಿ ದನಗಳನ್ನು ಓಡಿಸಿಕೊಂಡು ಹೋಗುವ ವೇಳೆ ಆಕಸ್ಮಿಕವಾಗಿ ಆಯತಪ್ಪಿ ಆವರಣವಿಲ್ಲದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಗುಜ್ಜಾಡಿ ಗ್ರಾಮದ ನಿವಾಸಿ ನಾಗರಾಜ (38) ಮೃತಪಟ್ಟವರು.
ನಾಗರಾಜ ಅವರು ಮೇ 1 ರಾತ್ರಿ ವೇಳೆಗೆ ಊಟ ಮಾಡಿ ಮನೆಯ ಸಿಟ್ಔಟ್ನಲ್ಲಿ ಮಲಗಿದ್ದು, ರಾತ್ರಿ 10ರ ವೇಳೆಗೆ ತೋಟಕ್ಕೆ ಬಂದ ದನಗಳನ್ನು ಓಡಿಸಿಕೊಂಡು ಹೋಗಿದ್ದಾರೆ. 11.30ರ ವೇಳೆಗೆ ಮನೆಯವರು ಹೊರಗೆ ಬಂದು ನೋಡಿದಾಗ ನಾಗರಾಜ ಅವರು ಇರಲಿಲ್ಲ. ಮೊಬೈಲ್ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ನೆರೆಕರೆಯವರೊಂದಿಗೆ ಹುಡುಕಾಟ ನಡೆಸಿದಾಗ ಪತ್ತೆಯಾಗಿರಲಿಲ್ಲ. ಮೇ 2ರ ಬೆಳಗ್ಗೆ ಕೊಡಪಾಡಿಯ ನಾರಾಯಣ ಅವರ ಜಾಗದಲ್ಲಿರುವ ಆವರಣವಿಲ್ಲದ ಬಾವಿಯಲ್ಲಿ ನಾಗರಾಜ ಅವರ ಮೃತದೇಹ ಪತ್ತೆಯಾಗಿದೆ.
ಪತ್ನಿ ಕವಿತಾ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






