ಕೇರಳ ಭೂಕುಸಿತದಲ್ಲಿ ಕರ್ನಾಟಕದ ನಾಲ್ವರು ಸಾವು, ಮಂಡ್ಯ ಮೂಲದ ಕುಟುಂಬ ಸಂಕಷ್ಟಕ್ಕೆ..!

Views: 84
ಕೇರಳದಲ್ಲಿ ಸಂಭವಿಸಿದ ಭೂಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗ್ತಿದ್ದು, ದುರಂತದಲ್ಲಿ ಇದುವರೆಗೂ 143ಕ್ಕೂ ಹೆಚ್ಚು ಮಂದಿ ಮೃತಪಟ್ಟಿರಿದ್ದಾರೆ. ಅದರಲ್ಲೂ ಕೇರಳದಲ್ಲಿ ವಾಸ ಮಾಡಿಕೊಂಡಿರುವ ಕರ್ನಾಟಕದ ನಾಲ್ವರು ಭೂಕುಸಿತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಇರಸವಾಡಿ ಗ್ರಾಮದ ರಾಜೇಂದ್ರ (50), ರತ್ನಮ್ಮ (45), ಪುಟ್ಟಸಿದ್ದಶೆಟ್ಟಿ (62), ರಾಣಿ (50 ಮೃತಪಟ್ಟಿದ್ದಾರೆ. ಸದ್ಯ ಪುಟ್ಟಸಿದ್ದಶೆಟ್ಟಿ ಹಾಗೂ ರಾಣಿ ಎಂಬುವವರ ಮೃತದೇಹಗಳನ್ನು ರಕ್ಷಣಾ ಪಡೆಗಳು ಹೊರತೆಗೆದಿದ್ದಾರೆ. ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬುವವರು ಗಾಯಗೊಂಡಿದ್ದಾರೆ. ವಯನಾಡು ಜಿಲ್ಲೆಯ ಮೆಪ್ಪಾಡಿಯ ವೈತ್ರಿ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆದಿದ್ದು ಮೃತರ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದಾರೆ.
ಮಂಡ್ಯ ಮೂಲದ ಕುಟುಂಬವೊಂದು ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಝಾನ್ಸಿ ಎಂಬುವವರ ಕುಟುಂಬ ಸಂಕಷ್ಟದಲ್ಲಿದೆ. ಮೈಸೂರಿನ ಸರಗೂರಿನ ಅನಿಲ್ ಕುಮಾರ್ ಎಂಬುವರನ್ನು ಮದುವೆಯಾಗಿದ್ದ ಝಾನ್ಸಿರಾಣಿ ಕುಟುಂಬ ಕೇರಳದಲ್ಲಿ ನೆಲೆಸಿತ್ತು. ಭೂಕುಸಿತದಲ್ಲಿ ಗಂಭೀರ ಗಾಯಗೊಂಡಿರುವ ಅನಿಲ್, ಪತ್ನಿ ಝಾನ್ಸಿ ಹಾಗೂ ತಂದೆ ದೇವರಾಜುರನ್ನು ಕೇರಳದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇನ್ನು, ಝಾನ್ಸಿರಾಣಿ ಪುತ್ರ ಎರಡೂವರೆ ವರ್ಷದ ಕಂದಮ್ಮ ನಿಹಾಲ್ ಹಾಗೂ ಅತ್ತೆ ಲೀಲಾವತಿ (55) ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಝಾನ್ಸಿರಾಣಿ ಕುಟುಂಬಸ್ಥರನ್ನು ಕಾಣಲು ಕೆ.ಆರ್.ಪೇಟೆಯಿಂದ ಕೇರಳಕ್ಕೆ ತೆರಳಿದ್ದಾರೆ.