ಕೃಷಿ

ಕುಂದಾಪುರ ಜಕ್ಣಿ ಬೆನ್ನಲ್ಲೇ ಕೃಷಿ ಕಾರ್ಯಕ್ಕೆ ಮುನ್ನ ಜಾನುವಾರುಗಳ ಸುಕ್ಷೇಮಕ್ಕಾಗಿ ಕೀಳು ಆಡುವ ಸಂಪ್ರದಾಯ  

Views: 238

ಕನ್ನಡ ಕರಾವಳಿ ಸುದ್ದಿ :ಪಿತೃಗಳಿಗೆ ಅನ್ನ, ನೀರು, ರಕ್ತಹಾರ ಕೊಟ್ಟು ಸಂತೃಪ್ತಿ ಪಡಿಸಿದ ನಂತರ ಕೃಷಿ ಕಾರ್ಯಕ್ಕೆ ಮುನ್ನ ಜಾನುವಾರುಗಳಿಗೆ ಯಾವುದೇ ವಿಘ್ನ ಬಾರದೇ ಇರಲಿ ಎಂಬ ಉದ್ದೇಶದಿಂದ ಕುಂದಾಪುರ ತಾಲೂಕಿನಾದ್ಯಂತ ಕೀಳು ಅಡುವ ಸಂಪ್ರದಾಯ ಎಲ್ಲೆಡೆ ಭರದಿಂದ ಪ್ರಾರಂಭವಾಗಿದೆ.

ಜಕ್ಣಿ ಆಚರಣೆಯಲ್ಲಿ ಪೂಜೆ ಮಾಡುವ ದೈವಕ್ಕಿಂತ ಇದು ಸ್ವಲ್ಪ ಕೀಳು ಮಟ್ಟದ್ದು ಎಂದು ನಂಬಿದ್ದ ರೈತರು ಕೃಷಿ ಕಾರ್ಯಕ್ಕೆ ಮುನ್ನ ರೈತರ ಹೊಲದ ಸುತ್ತ ಮುತ್ತ ಇರುವ ಜಾನುವಾರುಗಳನ್ನು ರಕ್ಷಣೆ ಮಾಡುವ ದೈವ ಇದಾಗಿದೆ. ಇಲ್ಲಿ ಆಚರಣೆಯಲ್ಲಿರುವ ಎಲ್ಲಾ ಕೀಳಿಗಿಂತಲೂ ನೈಲಾಡಿ ಕೀಳು ಘಟಾನುಘಟಿ ಎಂಬುದು ನಂಬಿಕೆ.

ಹಟ್ಟಿ ಕೀಳು, ಹಾಡಿ ಕೀಳು, ಗುಡ್ಡಿ ಕೀಳು ಎಂದು ಆಯಾ ಪ್ರದೇಶಕ್ಕೆ ಅನುಗುಣವಾಗಿ ನಾನಾ ಹೆಸರುಗಳಿಂದ ಕರೆಯುತ್ತಾರೆ.ಅಡುವುದು ಎಂದರೆ ಅಡಿಗೆ ಮಾಡಿ ಬಡಿಸುವುದು ಎಂದರ್ಥ.

ಹಟ್ಟಿ ಕೀಳು ಎಂದರೆ ದನ, ಕರು, ಎತ್ತು, ಹೋರಿ, ಎಮ್ಮೆಗಳಿಗೆ ಕೃಷಿ ಕಾರ್ಯದಲ್ಲಿ ಯಾವುದೇ ತೊಂದರೆ ಬಾರದೇ ಹಾಗೆ ಜಾನುವಾರಗಳ ಕೊಟ್ಟಿಗೆಗೆ ಕೋಳಿಯನ್ನು ಸುತ್ತರಿಸಿ ಕೊಯ್ದು  ಪಲ್ಲೆ ಮಾಡಿ ಎಲ್ಲರೂ ಸೇರಿ ಊಟ ಮಾಡುವುದು.

ಮನೆಯಲ್ಲಿ ಕೋಳಿ ಹೇನು, ಜಾನುವಾರುಗಳಲ್ಲಿ ಮೈಮೇಲೆ ಒಣಗು ಆದಲ್ಲಿ ಮನೆಯಲ್ಲಿಯೇ ಬೆಳೆದ ಹುರುಳಿಯನ್ನು ಬೇಯಿಸಿ ಹಾಡಿಯಲ್ಲಿರುವ ದೈವಕ್ಕೆ ನೈವೇದ್ಯ ಮಾಡಿ ಪೂಜೆ ಮಾಡುವ ಸಂಪ್ರದಾಯ ಇವತ್ತಿಗೂ ಕೃಷಿಕರು ಆಚರಣೆ ಮಾಡಿಕೊಂಡು ಬಂದಿದ್ದಾರೆ.

ಜಾನುವಾರುಗಳು ಮೇವನ್ನು ಅರೆಸುತ್ತಾ ಹಾಡಿ ಗುಡ್ಡಕ್ಕೆ ಹೋದಾಗ ಆಕಸ್ಮಿಕವಾಗಿ ಜೀವಕ್ಕೆ ಹಾನಿಯಾಗದಿರಲಿ ಎಂದು ಗುಡ್ಡದ ದೈವಕ್ಕೆ ಮೂರು ದಾರಿ ಸಂಧಿಸುವ ಸ್ಥಳದಲ್ಲಿ ಅನ್ನದ ಚರುವನ್ನು ಎಲೆಗೆ ಹಾಕಿ ಕೋಳಿಯನ್ನು ಹಾರ ನೀಡಿ ಸಂತೃಪ್ತಿ ಪಡಿಸುವ ಒಂದು ಕ್ರಮವಾಗಿದೆ.

ಕೀಳು ಅಡುವುದು ಹೆಚ್ಚಾಗಿ ಗಂಡಸರೆ ಪೂಜೆ ನೈವೇದ್ಯ ಮಾಡಿದ ನಂತರ ಕೇರಿಗೆ ಸಂಬಂದಿಸಿದ ರೈತರು ಮೂರು ದಾರಿಗೆ ಸೇರಿದ ಜಾಗದಲ್ಲಿ ಎಲೆ ಹಾಕಿ ಊಟಕ್ಕೆ ಬಡಿಸುತ್ತಾರೆ. ಎಲ್ಲರೂ ಸೇರಿ ಊಟ ಮಾಡುವ ಸಂಪ್ರದಾಯ ಕೃಷಿಕರಲ್ಲಿ ಅಚ್ಚಳಿಯದೇ ಉಳಿದಿದೆ.

ಕೃಷಿಕರು ವರ್ಷಂಪ್ರತಿ ಕೀಳು ಅಡುವ ಸಂಪ್ರದಾಯ ಮಾಡದಿದ್ದಲ್ಲಿ ಜಾನುವಾರುಗಳು ಕೃಷಿಯಲ್ಲಿ ತೊಡಿಗಿಸಿಕೊಂಡಾಗ ಹಲವಾರು ತೊಂದರೆ ಅನುಭವಿಸುವ ನಂಬಿಕೆ. ಗುಡ್ಡಕ್ಕೆ ಮೇಯಲು ಹೋದ ಜಾನುವಾರುಗಳಿಗೆ ಭಯಂಕರವಾದ ರೋಗ ಹರಡುವ ಭೀತಿ, ಕೃಷಿ ಕಾರ್ಯದಲ್ಲಿ ನಿರತ ಜಾನುವಾರುಗಳಿಗೆ ಆಕಸ್ಮಿಕ ಬಾದೆ ಕಾಣಿಸಿಕೊಳ್ಳುವುದು, ಈ ಎಲ್ಲಾ ಸಮಸ್ಯೆಗಳ ಸೂಕ್ತ ಪರಿಹಾರವೇ ಕೀಳು ಅಡುವುದು ಆಯಾ ಪ್ರದೇಶಕ್ಕೆ ಅನುಗುಣವಾಗಿ ದೈವಗಳಿಗೆ ಸಂತೃಪ್ತಿ ಪಡಿಸುವ ಕ್ರಮ ಇದಾಗಿದೆ.

Related Articles

Back to top button