ಕಾಳಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ: ಜಿತೇಂದ್ರ ಶೆಟ್ಟಿ ಕುಟುಂಬದವರಿಂದ ವಿವಿಧ ಶೈಕ್ಷಣಿಕ ಸಾಮಗ್ರಿ ಕೊಡುಗೆ ಹಸ್ತಾಂತರ
Views: 368
ಕನ್ನಡ ಕರಾವಳಿ ಸುದ್ದಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಳಾವರದಲ್ಲಿ ಎಲ್.ಕೆ.ಜಿ.ಮತ್ತು ಯು.ಕೆ.ಜಿ. ತರಗತಿಗಳ ಪುಟ್ಟ ಮಕ್ಕಳಿಗೆ ಅನುಕೂಲವಾಗುವಂತೆ ವಿಜಯಾ ಬ್ಯಾಂಕ್ನ ನಿವೃತ್ತ ಸೀನಿಯರ್ ಮ್ಯಾನೇಜರ್ ಶ್ರೀ ಜಿತೇಂದ್ರ ಶೆಟ್ಟಿ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಇಂದಿರಾ ಜೆ.ಶೆಟ್ಟಿ, ಪುತ್ರಿಯರಾದ ಸುಷ್ಮಾ ಶೆಟ್ಟಿ, ಡಾ. ಚರಿಷ್ಮಾ ಶೆಟ್ಟಿ ಮತ್ತು ಅಳಿಯ ವಿಕ್ರಮ್ ರಾಜ್ ಶೆಟ್ಟಿ ಅವರ ಕುಟುಂಬದ ವತಿಯಿಂದ ಶಾಲೆಗೆ ವಿವಿಧ ಶೈಕ್ಷಣಿಕ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಮಕ್ಕಳು ಆರಾಮವಾಗಿ ಕುಳಿತು ಕಲಿಯಲು ನೀಲ್ ಕಮಲ್ ಕಂಪನಿಯ 30 ಬಣ್ಣದ ಕುರ್ಚಿಗಳು ಹಾಗೂ 6 ಟೇಬಲ್ಗಳು, ಅಲ್ಲದೆ ಮಕ್ಕಳ ಕಲಿಕೆಗೆ ಅಗತ್ಯವಾದ ನೋಟ್ ಪುಸ್ತಕ, ಡ್ರಾಯಿಂಗ್ ಪುಸ್ತಕ, ಕ್ರೇಯಾನ್ಸ್, ರಬ್ಬರ್ ಹಾಗೂ ಪೆನ್ಸಿಲ್ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಜಿತೇಂದ್ರ ಶೆಟ್ಟಿಯವರು ಶಾಲೆಯ ಎಲ್ಲ ಮಕ್ಕಳಿಗೂ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ, ಮಕ್ಕಳ ಶಿಕ್ಷಣ ಹಾಗೂ ಉತ್ತಮ ಭವಿಷ್ಯದ ಕುರಿತು ಪೋಷಕರಿಗೆ ಕಿವಿಮಾತು ಹೇಳಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಅವರ ನಡತೆ, ಸಂಸ್ಕಾರ ಹಾಗೂ ಭವಿಷ್ಯದ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಚರಿಷ್ಮಾ ಶೆಟ್ಟಿಯವರು, “ಮಕ್ಕಳು ತಮ್ಮ ತಾಯಂದಿರನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾ ಬೆಳೆಯುತ್ತಾರೆ. ತಾಯಂದಿರ ನಡವಳಿಕೆ, ಮಾತು ಹಾಗೂ ಸಂಸ್ಕಾರ ಮಕ್ಕಳ ವ್ಯಕ್ತಿತ್ವದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಆದ್ದರಿಂದ ತಾಯಂದಿರು ಮಕ್ಕಳಿಗೆ ಉತ್ತಮ ಮಾದರಿಯಾಗಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ದೀಪಾ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಶಿಕ್ಷಕಿ ಶ್ರೀಮತಿ ವಸಂತಿ ಹೆಚ್.ಸ್ವಾಗತಿಸಿದರು. ಸಹಶಿಕ್ಷಕ ಉಳ್ತೂರು ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು, ದೈಹಿಕ ಶಿಕ್ಷಣ ಶಿಕ್ಷಕ ವಕ್ವಾಡಿ ಬಾಲಕೃಷ್ಣ ಶೆಟ್ಟಿ ವಂದನಾರ್ಪಣೆ ಮಾಡಿದರು.ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.











