ಸಾಂಸ್ಕೃತಿಕ

ಕಾಂತಾರ ಚಾಪ್ಟರ್-1 ಸಿನಿಮಾಗೆ ಸಾಲು ಸಾಲು ಅವಘಡಗಳು, ದೈವ ನುಡಿದಿದ್ದ ಎಚ್ಚರಿಕೆ ಮಾತುಗಳು ನಿಜವಾಗುತ್ತಿದೆಯಾ?

Views: 128

ಕನ್ನಡ ಕರಾವಳಿ ಸುದ್ದಿ:ರಿಷಬ್ ಶೆಟ್ಟಿ ಕಾಂತಾರ-2 ಸಿನಿಮಾ ಚಿತ್ರೀಕರಣ ಇನ್ನೂ ನಡೆಯುತ್ತಿರುವಾಗಲೇ ವಿಘ್ನಗಳ ಮೇಲೆ ವಿಘ್ನಗಳು ಎದುರಾಗುತ್ತಲೇ ಇವೆ. ಕಾಂತಾರ ಸಿನಿಮಾದಲ್ಲಿ ದೈವದ ಬಗ್ಗೆ ಉಲ್ಲೇಖಿಸಲಾಗಿತ್ತು. ಆದರೆ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಕಾಂತಾರ ಸಿನಿಮಾ ಮೇಲೆ ದೈವ ಮುನಿಸಿಕೊಂಡಿದೆಯಾ ಎಂಬ ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಲಾವಿದರ ಸರಣಿ ಸಾವು ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಲೇ ಇದೆ.

ರಿಷಬ್‌ ಶೆಟ್ಟಿ ಅವರು ಈ ವಿಘ್ನಗಳ ನಡುವೆಯೂ ಶೂಟಿಂಗ್‌ ಮುಂದುವರಿಸಿದ್ದಾರೆ. ನಿನ್ನೆ ಶೂಟಿಂಗ್‌ ವೇಳೆ ಮತ್ತೊಂದು ಅವಘಡ ಸಂಭವಿಸಿದ್ದು, ರಿಷಬ್‌ ಶೆಟ್ಟಿ ಸೇರಿ ಹಲವು ಮಂದಿ ಇದ್ದ ಬೋಟ್‌ ಮುಗುಚಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಘಟನೆಯಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಕೆಲವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಈ ಘಟನೆ ನಡೆದಿದೆ.

ಕಾಂತಾರಾ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಮೂರು ಕಲಾವಿದರು ಸರಣಿಯಾಗಿ ಸಾವನ್ನಪ್ಪಿರುವುದು ಕೂಡ ಆತಂಕಕ್ಕೀಡು ಮಾಡಿದೆ. ಮೊದಲಿಗೆ ಕೊಲ್ಲೂರು ಬಳಿ ಕೇರಳ ಮೂಲದ ಕಪಿಲ್‌ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಬಳಿಕ ಇದೇ ಸಿನಿಮಾ ಶೂಟಿಂಗ್‌ ಮುಗಿಸಿ ಬಂದಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್‌ ಪೂಜಾರಿ ಹೃದಯಾಘಾತದಿಂದ ಹಠಾತ್‌ ನಿಧನರಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಶೂಟಿಂಗ್‌ಗಾಗಿ ಬಂದಿದ್ದ ಮಿಮಿಕ್ರಿ ಕಲಾವಿದ ಕೂಡ ಹೃದಯಾಘಾತದಿಂದ ಸಾವನಪ್ಪಿದ್ದರು.

ಕಳೆದ ವರ್ಷ ಈ ಸಿನಿಮಾ ಕಲಾವಿದರು ಪ್ರಯಾಣಿಸುತ್ತಿದ್ದ ಮಿನಿ ಬಸ್‌ ಪಲ್ಟಿಯಾಗಿತ್ತು. ಬಳಿಕ ಹಾಸನ ಬಳಿ ಶೂಟಿಂಗ್‌ಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು.

ಈ ಹಿಂದೆ ರಿಷಬ್‌ಗೆ ದೈವ ನುಡಿದಿದ್ದ ಎಚ್ಚರಿಕೆ ಮಾತುಗಳು ನಿಜವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ತೀರ್ಥಹಳ್ಳಿ ಸಮೀಪ ಶೂಟಿಂಗ್ ವೇಳೆ ಯಾವುದೇ ಅನುಮತಿ ಪಡೆಯದೆ ಶೂಟಿಂಗ್ ನಡೆಸುತ್ತಿದ್ದೀರಿ ಎಂದು ತಡೆಯು ಬಂದಿದೆ.

ಕಾಂತಾರ ಚಾಪ್ಟರ್ 1 ಸಿನಿಮಾ ಸಾಲು, ಸಾಲು ಅವಘಡದ ಸವಾಲುಗಳನ್ನ ಎದುರಿಸುತ್ತಿದೆ. ಸಾಲು, ಸಾಲು ಅವಘಡಗಳ ಮಧ್ಯೆಯೂ ಕಾಂತಾರ ಚಲನಚಿತ್ರದ ಚಿತ್ರೀಕರಣ ಮುಂದುವರಿದಿದೆ.

ಹೊಸನಗರ ತಾಲೂಕಿನ ಮಾಸ್ತಿ ಕಟ್ಟೆಯ ಮಾಣಿ ಜಲಾಶಯದ ಹಿನ್ನೀರಿನಲ್ಲಿ ಕಾಂತಾರ-1 ಚಿತ್ರೀಕರಣ ನಡೆಯುತ್ತಿದೆ.

Related Articles

Back to top button