ಧಾರ್ಮಿಕ

  ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ

 ಶ್ರೀ ಬ್ರಹ್ಮಲಿಂಗವೀರಭದ್ರ ದುರ್ಗಾಪರಮೇಶ್ವರಿ  ದೇವಸ್ಥಾನ ಬಾರಕೂರು.

Views: 1883

           

 ಬಾರಕೂರು ಸಾಮಂತರಾಜನ ರಾಜಧಾನಿ. ರಾಜ ದೇವತಾರಾಧನೆಯಲ್ಲಿ ಅಪಾರ ನಂಬಿಕೆ ಉಳ್ಳವನು. ತನ್ನ ರಾಜಧಾನಿಯಾದ ಅಂದಿನ ಬಾರಕೂರಿನಲ್ಲಿ 365 ದೇವಸ್ಥಾನಗಳನ್ನು ಸ್ಥಾಪಿಸಿ ನಿತ್ಯವೂ ಒಂದೊಂದು ದೇವಾಲಯಕ್ಕೆ ಬೇಟಿಕೊಟ್ಟು ದೇವತಾರಾಧನೆ ಮಾಡುತ್ತಿದ್ದನೆಂದು ನಂಬಲಾಗಿದೆ. ಅಲ್ಲದೆ ಅವುಗಳಲ್ಲಿ ಹಲವು ದೇವಸ್ಥಾನಗಳನ್ನು ಬೇರೆ ಬೇರೆ  ಜಾತಿಯವರಿಗೆ ವಹಿಸಿ ಕುಲದೇವರಾಗಿ ಆರಾಧಿಸುವಂತೆ ತಿಳಿಸಿದ್ದು, ಅವುಗಳ ಸುಗಮ ನಿರ್ವಹಣೆಗೆ ಭೂಮಿ ಉಂಬಳಿ ಬಿಡುವುದರ ಮೂಲಕ ಮುಂದೆ ಯಾವುದೇ ಸಮಸ್ಯೆ ಯಾಗದಂತೆ ಎಚ್ಚರಿಕೆಯನ್ನೂ ವಹಿಸಿದ್ದನು..

ಪದ್ಮಶಾಲಿಗರ ಆಗಮನ :

ಈ ದೇವಾಲಯದ ಅರ್ಚಕರಿಗೆ ಬೇಕಾದ ಮಡಿಬಟ್ಟೆ ಗಳನ್ನು ತಮಿಳುನಾಡಿನಿಂದ ಆಯಾತ ಮಾಡಿಕೊಳ್ಳಲಾಗುತ್ತಿತ್ತು. ಈ ಆಯಾತಕ್ಕೆ ಒಮ್ಮೆ ಏನೋ ಸಮಸ್ಯೆಯಾಗಿದೆ. ಆಗ ರಾಜ ನೇಕಾರರಾದ ಪದ್ಮಶಾಲಿಗರನ್ನೇ ಬಾರಕೂರಿಗೆ ಕರೆಸಿಕೊಂಡನಂತೆ. ಈ ರೀತಿ ಬಂದ ಪದ್ಮಶಾಲಿಗರಿಗೆ ತಾನು ಆರಾಧಿಸುತ್ತಿದ್ದ ಬ್ರಹ್ಮಲಿಂಗೇಶ್ವರ

ದೇವಸ್ಥಾನವನ್ನು  ನೀಡಿ, ಬಾರಕೂರಿನಲ್ಲಿ ಸ್ಥಳದ ಅಭಾವದ ಕಾರಣ ನಗರದ ಹೊರಭಾಗದಲ್ಲಿ ಖಾಲಿ ಇದ್ದ ಪ್ರದೇಶವನ್ನು ಪದ್ಮಶಾಲಿಗರಿಗೆ ವಾಸ್ತವ್ಯಕ್ಕಾಗಿ, ನೀಡಿ ಆ ಪ್ರದೇಶಕ್ಕೆ ಪದ್ಮಶಾಲಿಕೇರಿ ಎಂದು ಕರೆಯಲಾಗಿದೆ. ಅದುವೇ ಇಂದಿನ ಸಾಲಿಕೇರಿ. ಪದ್ಮಶಾಲಿಕೇರಿಯಲ್ಲಿ ನೆಲಸಿದ ಪದ್ಮಶಾಲಿಗರು ನೇಕಾರಿಕೆ ಮಾಡಿ, ಆ ಸಂಸ್ಥಾನದ ವಸ್ತ್ರಸಮಸ್ಯೆ ನೀಗಿಸುವ ಮೂಲಕ ತಮ್ಮ ಜೀವನ ಕಂಡುಕೊಂಡರು. ರಾಜನಿಂದ ಪಡೆದ ದೇವಾಲಯದ ಬಲ ಭಾಗದಲ್ಲಿ ಹಿಂದೆ ಕಂಚಿಯಲ್ಲಿ ಆರಾಧಿಸಿದ ದೇವಿಗೆ ಗುಡಿಯನ್ನೂ ಕಟ್ಟಿ ಆರಾಧಿಸಿಕೊಂಡು ಬಂದಿದ್ದಾರೆ.

 ಶಿಲಾಶಾಸನ:

 ದೇವಾಲಯದಲ್ಲಿ ಶಿಲಾಶಾಸನವಿದ್ದು ಇದನ್ನು ಓದಿ ದಾಖಲಿಸಿರುವ ಖ್ಯಾತ ಇತಿಹಾಸತಜ್ಞ ಡಾ: ಗುರುರಾಜ್ ಭಟ್ಟ್ ರವರು ಅದರ ವಿವರವನ್ನು ಈ ರೀತಿ ದಾಖಲಿಸಿದ್ದಾರೆ. ” ಹೈೂಯ್ಸಳ ವಂಶದ ರಾಜನಾದ ಪ್ರತಾಪ ಚಕ್ರವರ್ಥಿ ವೀರಬಲ್ಲಾಳ ದೇವನು  ಶಕ  1255  ಶ್ರೀಮುಖ ಸಂಸರದ ಮಾಘ ಬಹುಳ ಪಂಚಮಿ ಗುರವಾರದ ದಿನ ಪಟ್ಟದ ಪಿರಿಯರಸಿ ಚಿಕ್ಕಾಯಿ  ತಾಯಿಯ ಸಮ್ಮುಖದಲ್ಲಿ ಮಹಾ ಪ್ರಧಾನ ನೈಜಪದಣ್ಣಾಯಕ ಅಜಮ್ನ ಸಾಯಿ ಮತ್ತಿನ್ನಿತರರು ವೀರೇಶ್ವರ ದೇವಾಲಯಕ್ಕೆ ಬಿಟ್ಠ ಉಂಬಳಿ….’ ಎಂಬ ದಾಖಲೆಯು ರಾಜ್ಯದ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿರುವುದನ್ನು ಸಮಾಜಸ್ಥರು  ಬಹಳ ಹಿಂದೆ ಪತ್ತೆ ಹಚ್ಚಿದ್ದು  ಶಾಸನದಲ್ಲಿರುವ 1255 ಶಕ ವರ್ಷವು  ಕ್ರಿ.ಶ. 1333 ಆಗುತ್ತದೆ ಎಂದಿದ್ದು  ನಂತರದ ಬರಹ ಓದಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಪದ್ಮಶಾಲಿಗರ ಮೂಲಸ್ಥಾನ  ತೆಲಗು ಮಾತನಾಡುವ  ಆಂದ್ರಪ್ರದೇಶ ವಾಗಿದೆ. ಕಾರಣಾಂತರದಿಂದ ,ಇವರಲ್ಲಿ ಒಂದು ಗುಂಪು, ಈಗ  ಸುಮಾರು 1400 ವರ್ಷಗಳ ಹಿಂದೆ ಕೃಷ್ಣಾನದಿ ತೀರದ ಅಮರಾವತಿಯಿಂದ ಹೊರಟು ಕಾಂಚಿಪುರಂ ನಗರಕ್ಕೆ ಬಂದು ನೆಲಸಿ, ಅಲ್ಲಿ ರೇಷ್ಮೆ ಸೀರೆ ತಯಾರಿಕೆಯಲ್ಲಿ ತಮ್ಮ ಬದುಕನ್ನು  ಕಟ್ಟಿ ಕೊಂಡರೆಂದು  ತಿಳಿದು ಬಂದಿದೆ.

ಈ ಕುರಿತು ಪರಿಶೀಲನೆಗಾಗಿ ಕಂಚಿಗೆ ಹೋದಾಗ, ಕಂಚಿಯಲ್ಲಿ 4,000 ಕುಟುಂಬಗಳಿದ್ದು , ಅವರಲ್ಲಿ 101 ಮನೆತನವಿದೆ. ಪದ್ಮಶಾಲಿ ಕುಟುಂಬಗಳ ಅಲ್ಲಿಯ ಬದುಕಿನ ಸಮಯದಲ್ಲಿ ಒಂದು ಮನೆತನದ ಎರಡು ಕುಟುಂಬಗಳಿಗೆ ಸಂಕಟವುಂಟಾಗಿ ಆ ನಗರದ “ಕಾಳಿದೇವಿ”ಯ ಆರಾಧನೆ ಮಾಡಿದ ಕಾರಣ ಆ ಕುಟುಂಬಗಳ ಸಮಸ್ಯೆ ಪರಿಹಾರವಾಯಿತೆಂದೂ, ಆ ಕುಟುಂಬಗಳ ಪೀಳಿಗೆಯವರು ಈಗ ಕಂಚಿ, ಚನ್ನೈ, ಬೆಂಗಳೂರಲ್ಲಿ ನೆಲೆಸಿದ್ದು ಆಷಾಡ ಮಾಸದ ಎರಡನೆ ಭಾನುವಾರ ಕಾಂಚೀಪುರದಲ್ಲಿ ಸೇರಿ ಕುಲದೇವರ ಆರಾಧನೆ ಮಾಡುತ್ತಿರುವ ಬಗ್ಗೆ ತಿಳಿಯಿತು. ಆ ದೇವಾಲಯವೇ  Karukkinil Amranthval Amma ಎಂಬುದು ತಮಿಳಿನಲ್ಲಿ ದೇವಿಯ ಹೆಸರಾಗಿದೆ. ಭಕ್ತರು ಕಾಳಿ ದೇವಿ ಎಂದು ಕರೆಯುತ್ತಾರೆ.

ಪದ್ಮಶಾಲಿಕೇರಿಯಲ್ಲಿ ನೆಲೆಸಿ ಬಾರಕೂರಿನ ದೇವತಾರಾಧನೆ ಮಾಡಿಕೊಂಡಿದ್ದ ಪದ್ಮಶಾಲಿಗರು, ತಮ್ಮ ವಾಸ್ತವ್ಯದ ಸಮೀಪದಲ್ಲೇ, ಹಿಂದೆ ಕಂಚಿಯಲ್ಲಿ ಆರಾಧಿಸಿಕೊಂಡು ಬಂದ ದೈವಗಳ ಗುಡಿಯನ್ನು ಕಟ್ಟಿಕೊಂಡು ಆರಾಧನೆ ಮಾಡಲಾಗಿದೆ.ಅದುವೇ ಇಂದಿನ ಸಾಲಿಕೇರಿಯಲ್ಲಿರುವ “ಕುಮಾರ ಚಾವಡಿ”

ರಾಜನಿಂದ ಪಡೆದು ಆರಾಧನೆ ಮಾಡಿಕೊಂಡು ಬಂದ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ , ದಕ್ಷಯಜ್ಞ ದಂತಹ ಘಟನೆ ಪದ್ಮಶಾಲಿ ಸಮೂಹದಲ್ಲೇ ನಡೆದು , ಬ್ರಹ್ಮಲಿಂಗೇಶ್ವರನು ಪ್ರತ್ಯಕ್ಷನಾಗಿ, “ವೀರಭದ್ರಾವತಾರದಲ್ಲಿ” ಗೋಚರಿಸಿದನೆಂದೂ, ಆನಂತರ ರಾಜನ ಸಲಹೆ ಮೇರೆಗೆ ಬ್ರಹ್ಮಲಿಂಗೇಶ್ವರ ಲಿಂಗವನ್ನು ಜಲಾಧಿವಾಸ ಮಾಡಿ, ಅದೇ ಪೀಠದಲ್ಲಿ ವೀರಭದ್ರನ ಮೂರ್ತಿ ಪ್ರತಿಷ್ಟಾಪಿಸಿ “ಶ್ರೀಬ್ರಹ್ಮಲಿಂಗವೀರಭದ್ರ” ದೇವರು ಎಂದು ಕರೆದು ಆರಾಧಿಸಿಕೊಂಡು ಬರಲಾಗುತ್ತಿದೆ.

ಕಾಲಾನಂತರದಲ್ಲಿ ಬಾರಕೂರಿನ ದೇವಳದ ಉತ್ಸವ ಮೂರ್ತಿ, ಮತ್ತು ಬೆಲೆ ಬಾಳುವ ವಸ್ತುಗಳನ್ನು ರಕ್ಷಣೆಗೋಸ್ಕರ ಪದ್ಮಶಾಲಿಕೇರಿಗೆ ತರಲಾಗಿದ್ದು, ಅಲ್ಲಿ ಆ ಉತ್ಸವ ಮೂರ್ತಿಯನ್ನೇ ಬಹು ವಿಜೃಂಬಣೆಯಿಂದ ಆರಾಧನೆ ಮಾಡಿಕೊಂಡು ಬಂದಿದ್ದು, ಬಾರಕೂರಿನ ಆಡಳಿತವನ್ನು ಕೈ ಬಿಡಲಾಗಿದೆ. ಕುಲದೇವರ ಬಗ್ಗೆ ಹೆಚ್ಚು ಆಸಕ್ತಿ ಇದ್ದವರು ಪದ್ಮಶಾಲಿ ಕೇರಿಗೆ ಸೇರಿಕೊಂಡಿದ್ದಿರಬಹುದು. ಆದರೆ ಬಾರಕೂರಿನಲ್ಲಿ ಪದ್ಮಶಾಲಿಗರ ಮನೆಗಳ ಬಹಳ ಕಡಿಮೆ ಇದ್ದು ಅವರೆಲ್ಲರೂ ಬಡತನದಿಂದ ಕೂಡಿದವರಾಗಿದ್ದರು. ಬಾರಕೂರಿಗೆ ಸೇರಿಕೊಂಡು ದೂರದೂರಿನಲ್ಲಿ ನೆಲೆಸಿದವರು ಆಡಳಿತವಹಿಸಲು ಮುಂದೆ ಬರಲಿಲ್ಲ. ಅನಿವಾರ್ಯವಾಗಿ ಬಾರಕೂರಿನಲ್ಲಿ ನೆಲೆಸಿದವರೇ  ಆಡಳಿ ನಿರ್ವಹಿಸಿಕೊಂಡು ಬರಬೇಕಾಯ್ತು. ಹೇಗೋ ಕಷ್ಟದಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದವೆಂದು ತಿಳಿದು ಬಂದಿದೆ. ಬಾರಕೂರಿನ ಉತ್ಸವ ಮೂರ್ತಿ ಪದ್ಮಶಾಲಿ ಕೇರಿಗೆ ತೆಗೆದುಕೊಂಡು ಹೋದ ಕಾರಣ ಬಾರಕೂರಲ್ಲಿ ಉತ್ಸವ ಮೂರ್ತಿ ಇಲ್ಲದೆ ಪೂಜೆಗಳು ನಡೆಯುತ್ತಿತ್ತು. ಇಲ್ಲಿ ಕೆಲವೊಂದು ವರ್ಷ ಹಣಕಾಸಿನ ತೊಂದರೆಯಿಂದ ವಾರ್ಷಿಕ ಉತ್ಸವ ನಿಂತು ಹೋಗಿರುವುದು, ಆ ಸಮಯದಲ್ಲಿ ಪರಿಸ್ಥಿತಿ ನೋಡಿದ ಭಕ್ತರು  ಪೂರ್ಣ ಖರ್ಚು ಭರಿಸಿ ಉತ್ಸವ ನಡೆಸಿದ ಸಂದರ್ಭಗಳು ನಡೆದಿದೆಯಂತೆ.

ಪರಿವಾರ ದೈವಗಳು  ನಮಗೂ ಬೇಕೆಂಬುದನ್ನು ಮನಗಂಡ ಬಾರಕೂರಿನ ಭಕ್ತರು ಇಲ್ಲಿ ಪದ್ಮಶಾಲಿಕೇರಿಯಲ್ಲಿದ್ದ  ಪರಿವಾರ ದೈವಗಳನ್ನು ಪ್ರತಿಷ್ಟಾಪಿಸಿ ಆರಾಧಿಸಿಕೊಂಡು ಬಂದಿದ್ದಾರೆ. ಆದರೆ ಅಲ್ಲಿಯಂತೆ ದೈವಗಳ ಸೊತ್ತುಗಳಾಗಲಿ, ಕೋಲ ಮೊದಲಾದ ಸೇವೆಗಳಾಗಲಿ ಇಲ್ಲಿ ನಡೆಯುತ್ತಿಲ್ಲ.

  ಆರಾಧಿಸುವ ದೈವ ದೇವರು:

ದೇವಳದಲ್ಲಿ ಮಹಾಗಣಪತಿ, ತ್ರಿಗುಣಾತ್ಮಕೆ ದುರ್ಗಾಪರಮೇಶ್ವರಿ ಮತ್ತು ಬ್ರಹ್ಮಲಿಂಗವೀರಭದ್ರ ದೇವರನ್ನು ಪರಿವಾರ ದೈವಗಳಾಗಿ, ಕ್ಷೇತ್ರಪಾಲ, ರಕ್ತೇಶ್ವರಿ, ಮಹಾಕಾಳಿ, ಬೊಬ್ಬರ್ಯ, ಸಪ್ತಮಾತ್ರಿಕೆಯರು ಚಾವಡಿಯ ಹೊರಬಾಗದಲ್ಲಿದ್ದರೆ, ಒಳಗಡೆ, ಕುಮಾರ, ಅಬ್ಬಗ ದಾರಗ, ಪಂಜುರ್ಲಿ, ಮುಕ್ಕಾಲು ಪಂಜುರ್ಲಿ, ಹಾಯ್ಗುಳಿ, ಮಲೆಸಾವರಿ, ಕಲ್ಕುಡ ಹಾಗೂ ಗುರು ಸಾನಿಧ್ಯಗಳ ಆರಾಧನೆ  ನಡೆಯುತ್ತಿದೆ.

ಸೇವೆಗಳು:-ಇನ್ನೊಂದೆಡೆ, ಅನ್ಯರ ಜಾಗದಲ್ಲಿ ನಾಗ ಸಾನಿಧ್ಯವೂ ಇದ್ದು ವಾರ್ಷಿಕ ಉತ್ಸವದಂದು ನಾಗದೇವರಿಗೆ ಹಾಲು ಹಿಟ್ಟು ಸೇವೆಯಿಂದ ಆರಂಭವಾಗಿ ದಕ್ಕೆ ಬಲಿ(ಡಕ್ಕೆಬಲಿ), ತುಲಾಭಾರ, ಮೊದಲಾದ ಹರಕೆಗಳು ಸಂದಾಯವಾಗುತ್ತವೆ. ವಾರ್ಷಿಕ ಉತ್ಸವದ ಮೊದಲ ದಿನ ಶುದ್ಧ ಕಲಶ, ಶ್ರೀಚಕ್ರ ಆರಾಧನೆ ಮತ್ತು ರಾತ್ರಿ ಗೆಂಡ ಸೇವೆಗಳು ನಡೆಯುತ್ತವೆ.

ಕೇರಳದ ಕಾಸರುಗೋಡು ಜಿಲ್ಲೆ ವ್ಯಾಪ್ತಿಯಲ್ಲಿ ಎರಡು ದೇವಸ್ಥಾನಗಳು ಸೇರಿ ಕರಾವಳಿಯಲ್ಲಿ ಪದ್ಮಶಾಲಿಗರ ಹದಿನೈದು ವೀರಭದ್ರ ದೇವಸ್ಥಾನಗಳಿದ್ದು, ಅವುಗಳಿಗೆಲ್ಲ  ಈ ದೇವಾಲಯವು ಮೂಲಸ್ಥಾನವಾಗಿದೆ.

ಪೂಜೆ ಮತ್ತು ನಡೆಯುವ ಸೇವೆಗಳು.

ದೇವಳದಲ್ಲೀಗ ತ್ರಿಕಾಲ ಪೂಜೆಯಿದೆ. ಪ್ರತಿ ಸಂಕ್ರಾಂತಿಯಂದು ಪರಿವಾರ ದೈವಗಳಿಗೆ ವಿಶೇಷ ಪೂಜೆ ನಡೆಯುತ್ತದೆ. ಇಲ್ಲಿ ನಮ್ಮ ಸಮಾಜದ ಅರ್ಚಕರೆ ಪೂಜಾ ಕಾರ್ಯ ನಿರ್ವಹಿಸುತ್ತಾರೆ. ಶ್ರಾವಣ ಮಾಸದ ಒಂದು ತಿಂಗಳ ಪ್ರಧಾನ ದೇವರುಗಳಿಗೆ “ಸೋಣೆಯಾರತಿ” ಸೇವೆ ನಡೆಯುತ್ತದೆ. ನವರಾತ್ರಿ, ಶಿವರಾತ್ರಿ ಆರಾಧನೆ, ಪ್ರತಿ ತಿಂಗಳ ಮೊದಲ ಭಾನುವಾರ ಸತ್ಯನಾರಾಯಣ ಪೂಜೆ ಮೂಡುಗಣಪತಿ ಸೇವೆ, ಪರಿವಾರಗಳ ದೈವಗಳಿಗೆ ಪನಿವಾರ ಸೇವೆಗಳು ನಡೆಯುತ್ತಿದೆ.

ಗೋಪಾಲ ಹರಿಹರಪುರ ಅನಂತ ಶೆಟ್ಟಿಗಾರ್ ಸುರತ್ಕಲ್.

ಮಾಜಿ ಮೊಕ್ತೇಸರರು,

ಮೊ.9845800180

Related Articles

Back to top button
error: Content is protected !!