ಉಪ್ಪುಂದ ಬೊಲೇರೊ ಡಿವೈಡರ್ಗೆ ಡಿಕ್ಕಿ: ಓರ್ವ ಸಾವು

Views: 56
ಉಪ್ಪುಂದ: ಬೈಂದೂರು ಸಮೀಪ ಬೊಲೇರೊ ವಾಹನ ರಸ್ತೆಯ ಡಿವೈಡರ್ಗೆ ಢಿಕ್ಕಿ ಹೊಡೆದು ಓರ್ವ ಮೃತ ಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.
ರವಿವಾರ ಬೆಳಗ್ಗಿನ ಜಾವ ಕಿರಿಮಂಜೇಶ್ವರ ರಾ.ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ರಾಮಣ್ಣ ಎನ್ನುವವರು ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಹನಮಂತ ಹಾಗೂ ಮನೆಯವರು ಉಡುಪಿಯಿಂದ ಬೊಲೇರೋ ವಾಹನದಲ್ಲಿ ಅವರ ಮಾವನ ಮಗನ ಮದುವೆಯ ಹಿನ್ನೆಲೆಯಲ್ಲಿ ಬಾದಾಮಿಗೆ ಹೋಗಿ ಎ. 27ರ ಸಂಜೆ ಅಲ್ಲಿಂದ ವಾಪಸ್ ಹೊರಟಿದ್ದರು. ಎ. 28ರ ಬೆಳಗ್ಗಿನ ಜಾವ 4.30ರ ವೇಳೆ ಕಿರಿಮಂಜೇಶ್ವರ ತಲುಪಿದಾಗ ಅಪಘಾತ ಸಂಭವಿಸಿದೆ.
ಡಿವೈಡರ್ಗೆ ಢಿಕ್ಕಿಯಾಗಿ ಬೊಲೇರೋ ದೂರ ಸಾಗಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ನಿಂತಿದೆ. ರಾಮಣ್ಣ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಕುಂದಾಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಪರೀಕ್ಷಿಸಿ ಮೃತರಾಗಿರುವುದಾಗಿ ತಿಳಿಸಿದರು.
ಚಾಲಕ ನಿರಂಜನ, ಶಿವಕ್ಕ, ರೇಷ್ಮಾ, ಕಾವ್ಯ, ಪ್ರಜ್ವಲ್ ಗಾಯಗೊಂಡವರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.






