ಹೊರಟ್ಟಿಯವರನ್ನು ಹೊಡೆಯಲು ಹೋಗಿದ್ದ ಜಮೀರ್; ಕರಿಯ ಎಂದು ಹೇಳಿಕೆ ಬೆನ್ನಲ್ಲೆ ಕುಮಾರಸ್ವಾಮಿ ತಿರುಗೇಟು

Views: 79
ಕನ್ನಡ ಕರಾವಳಿ ಸುದ್ದಿ: ಚುನಾವಣಾ ಚನ್ನಪಟ್ಟಣದ ಉಪಚುನಾವಣೆ ಪ್ರಚಾರದ ವೇಳೆ ಜಮೀರ್ ಅಹ್ಮದ್ ಕುಮಾರಸ್ವಾಮಿ ಅವರನ್ನು ಕರಿಯ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೆ ಇಂದು ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ಅಹ್ಮದ್ ಅವರ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ತಮ್ಮ ಮತ್ತು ಜಮೀರ್ ಅವರ ಆತ್ಮೀಯತೆ ಕೇವಲ ರಾಜಕೀಯವಾಗಿ ಮಾತ್ರ ಎಂದು ಸ್ಪಷ್ಟಪಡಿಸಿರುವ ಅವರು, ತಮ್ಮನ್ನು ಕರಿಯ ಎಂದು ಕರೆದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಾವು ಜಮೀರ್ಅಹ್ಮದ್ ಅವರನ್ನು ಕುಳ್ಳ ಎಂದು ಕರೆದಿಲ್ಲ. ಚಾಮುಂಡೇಶ್ವರಿ ಮುಂದೆ ನಿಂತಿದ್ದೇನೆ. ಸತ್ಯವನ್ನು ಹೇಳುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಮತದಾರರ ಆರ್ಶೀವಾದವಿದೆ. ಉತ್ತಮ ರೀತಿಯಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕುಮಾರಸ್ವಾಮಿ, ಜಮೀರ್ ಹೇಳಿಕೆಯಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ. ಎನ್ಡಿಎ ಅಭ್ಯರ್ಥಿ ಚನ್ನಪಟ್ಟಣದಲ್ಲಿ ಗೆಲ್ಲುತ್ತಾರೆ ಎಂದರು.
ಕರಿಯ-ಕುಳ್ಳ ಎಂದು ಮಾತನಾಡಿಸಿಕೊಳ್ಳುವ ಸಂಸ್ಕೃತಿಯಿಂದ ಬಂದವನು ನಾನಲ್ಲ. ಆದರೆ,ಈ ಹೇಳಿಕೆಯನ್ನು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಸಮರ್ಥಿಸಿಕೊಂಡಿರುವುದಕ್ಕೆ ಕಿಡಿಕಾರಿದರು.