ವಾರಣಾಸಿ: ಶಿವಲಿಂಗವನ್ನು ಹೊರತುಪಡಿಸಿ, ಉಳಿದ ಜಾಗ ವೈಜ್ಞಾನಿಕ ಸರ್ವೆಗೆ ನ್ಯಾಯಾಲಯ ಆದೇಶ

Views: 3
ಮಂದಿರ ಇರುವ ಜಾಗದಲ್ಲಿ ಮಸೀದಿ ಕಟ್ಟಲಾಗಿದ್ದು, ,ಈ ಕುರಿತು ವೈಜ್ಞಾನಿಕ ಸರ್ವೆ ನಡೆಸಬೇಕು ಎಂದು ಹಿಂದೂ ಭಕ್ತರ ಪರವಾಗಿ ಎ.ಕೆ ವಿಶೇಶ್ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
ಇಲ್ಲಿನ ಕಾಶೀ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಅಸ್ತಿತ್ವ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಲು ವಾರಣಾಸಿ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
ಸದ್ಯ ಪ್ರವೇಶ ನಿರ್ಬಂಧಿಸಲಾಗಿರುವ ವಝೂಖಾನಾದಲ್ಲಿದೆ ಎನ್ನಲಾದ ಶಿವಲಿಂಗವನ್ನು ಹೊರತುಪಡಿಸಿ ಉಳಿದ ಭಾಗದಲ್ಲಿ ವೈಜ್ಞಾನಿಕ ಸರ್ವೆ ನಡೆಸುವಂತೆ ಆದೇಶದಲ್ಲಿ ಹೇಳಲಾಗಿದೆ.
ಇದಕ್ಕೂ ಮೊದಲು ಹಿಂದೂ ಹಾಗೂ ಮುಸ್ಲಿಂ ಸಮುದಾಯದ ವಾದ ಹಾಗೂ ಪ್ರತಿವಾದವನ್ನು ನ್ಯಾಯಾಲಯ ಆಲಿಸಿತು. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ ಇಲ್ಲಿ ಕಾಶಿ ವಿಶ್ವನಾಥ ದೇಗುಲದ ಸಂಕೀರ್ಣದಲ್ಲಿರುವ ಜ್ಞಾನವಾಪಿ ಮಸೀದಿಯ ಸಂಪೂರ್ಣ ಸರ್ವೆ ನಡೆಸಬೇಕು ಎಂದು ಹಿಂದೂ ಭಕ್ತರ ಪರ ವಕೀಲರು ಒತ್ತಾಯಿಸಿದ್ದರು.
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ ಸಮೀಕ್ಷೆ ನಡೆಸಿದಲ್ಲಿ ಕಟ್ಟಡಕ್ಕೆ ಹಾನಿಯಾಗಲಿದೆ ಎಂದು ಮುಸ್ಲಿಂ ಪರ ವಕೀಲರು ವಾದ ಮಂಡಿಸಿದರು. ಎರಡು ಕಡೆ ವಾದ ಆಲಿಸಿದ ನ್ಯಾಯಾಧೀಶರು ವೈಜ್ಞಾನಿಕ ಸರ್ವೆಗೆ ಆದೇಶಿಸಿದರು.