ರಾಜ್ಯಸಭೆಗೆ ರಾಜೀವ್ ಚಂದ್ರಶೇಖರ್, ಸೋಮಣ್ಣಗೆ ಟಿಕೆಟಿಲ್ಲ:ಸಾಮಾನ್ಯ ಕಾರ್ಯಕರ್ತನಿಗೆ BJP ಟಿಕೆಟ್ ಘೋಷಣೆ

Views: 56
ನವದೆಹಲಿ: ಇದೇ ಫೆಬ್ರವರಿ 27ರಂದು ನಡೆಯುವ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ.
ಕರ್ನಾಟಕದಿಂದ ಸಾಮಾನ್ಯ ಕಾರ್ಯಕರ್ತ ಮಾಜಿ ಪರಿಷತ್ ಸದಸ್ಯ ನಾರಾಯಣ ಕೃಷ್ಣಸಾ ಬಾಂಡಗೆ ರಾಜ್ಯಸಭಾ ಟಿಕೆಟ್ ಘೋಷಣೆ ಮಾಡಲಾಗಿದೆ.
ರಾಜ್ಯಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಿಸಿರುವ ಹಿನ್ನೆಲೆಯಲ್ಲಿ ನಾರಾಯಣಸಾ ಬಾಂಡಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಜ್ಯಸಭಾ ಟಿಕೆಟ್ ನೀಡಿದ್ದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಬೇರೆ ಪಕ್ಷದಲ್ಲಿ ಇದನ್ನು ನಾವು ನಿರೀಕ್ಷೆ ಮಾಡಲೂ ಸಾಧ್ಯವಿಲ್ಲ.
ಕಳೆದ ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದನ್ನು ಹೈಕಮಾಂಡ್ ಗುರುತಿಸಿದೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೂ ಬೆಲೆ ಕೊಡುತ್ತೆ ಅನ್ನೋದಕ್ಕೆ ನನ್ನನ್ನು ರಾಜ್ಯಸಭಾ ನಿಯುಕ್ತಿ ಮಾಡಿರೋದು ಉದಾಹರಣೆ. ನನಗೆ ಪಕ್ಷ ಹೆಚ್ಚು ಶಕ್ತಿ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರೂ ಸೇರಿ ಎಲ್ಲರನ್ನೂ ಅಭಿನಂದಿಸುತ್ತೇನೆ. ಸದಾ ಪಕ್ಷದ ಸಲುವಾಗಿ ನಿರಂತರವಾಗಿ ಕೆಲಸ ಮಾಡುತ್ತೇನೆ ಎಂದು ನಾರಾಯಣಸಾ ಬಾಂಡಗೆ ಪ್ರತಿಕ್ರಿಯಿಸಿದ್ದಾರೆ.
ಬಾಗಲಕೋಟೆಯಲ್ಲಿರುವ ನಾರಾಯಣಸಾ ಬಾಂಡಗೆ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಾರಾಯಣಸಾ ಅವರ ಮನೆಗೆ ಸಂಬಂಧಿಗಳು, ಆಪ್ತರು ದೌಡಾಯಿಸಿದ್ದು, ಸಿಹಿ ತಿನ್ನಿ ಸಂಭ್ರಮ ಆಚರಿಸಿದ್ದಾರೆ. ನರೇಂದ್ರ ಮೋದಿಗೆ ಜೈಕಾರ ಹಾಕಿ ಹರ್ಷ ವ್ಯಕ್ತಪಡಿಸಿದ್ದಾರೆ.
ನಾರಾಯಣಸಾ ಭಾಂಡಗೆ ಯಾಕೆ ಟಿಕೆಟ್?
17ನೇ ವಯಸ್ಸಿನಲ್ಲಿಯೇ RSS ಸೇರ್ಪಡೆಯಾದ ನಾರಾಯಣಸಾ ಭಾಂಡಗೆ ಅವರು ಕಳೆದ 40 ವರ್ಷಗಳಿಂದ RSSನಲ್ಲಿದ್ದಾರೆ. ಬಾಗಲಕೋಟೆಯಲ್ಲಿ ಎಬಿವಿಪಿ ಸದಸ್ಯರಾಗಿದ್ದ ಇವರು ವಿಶ್ವ ಹಿಂದೂ ಪರಿಷತ್ನಲ್ಲೂ ಕೆಲಸ ಮಾಡಿದ್ದಾರೆ. ರಾಮಮಂದಿರಕ್ಕೆ ಬಾಗಲಕೋಟೆ, ವಿಜಯಪುರಕ್ಕೆ ಕಾರ್ಯಕರ್ತರ ಜೊತೆ ಸೇರಿ ರಾಮಶೀಲಾ ಕಳಿಸಿದ್ದಾರೆ. 1973ರಲ್ಲಿ ಜನಸಂಘ ಸೇರಿದ್ರು, ಇಂದಿರಾ ಗಾಂಧಿಯವರಿಗೆ ಕಪ್ಪು ಭಾವುಟ ಪ್ರದರ್ಶನ ಮಾಡಿದ್ದಕ್ಕೆ 18 ದಿನ ಕಾರಾಗೃಹದಲ್ಲಿ ಇದ್ದರು. ಕಾಶ್ಮೀರದಲ್ಲಿ ನಡೆದ ತಿರಂಗಾ ಯಾತ್ರೆಯಲ್ಲೂ ಭಾಗಿಯಾಗಿದ್ದರು. ಬಿಜೆಪಿ ಬಾಗಲಕೋಟೆ ಜಿಲ್ಲೆಯ ಮೊದಲ ಕಾರ್ಯದರ್ಶಿ ನಾರಾಯಣಸಾ ಭಾಂಡಗೆ ಅವರಾಗಿದ್ದಾರೆ.
ಫೆಬ್ರವರಿ 15 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಫೆಬ್ರವರಿ 27 ಮತದಾನ ಮತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಫೆಬ್ರವರಿ 27 ರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು ಅಂದೇ ಸಂಜೆ 5 ಗಂಟೆಯಿಂದ ಫಲಿತಾಂಶ ಪ್ರಕಟವಾಗಲಿದೆ.