ಮಂಗಳೂರು :ವಸತಿ ಸಮುಚ್ಚಯ ಐದನೇ ಮಹಡಿಯಿಂದ ಬಿದ್ದು ಬಾಲಕ ಸಾವು

Views: 121
ಕನ್ನಡ ಕರಾವಳಿ ಸುದ್ದಿ: ವಸತಿ ಸಮುಚ್ಚಯ ಐದನೇ ಮಹಡಿಯಿಂದ ಬಿದ್ದು 13 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಮಂಗಳೂರು ನಗರದ ಮೇರಿಹಿಲ್ನಲ್ಲಿ ನಡೆದಿದೆ.
ಮೇರಿಹಿಲ್ನ ಖಾಸಗಿ ಶಾಲೆಯೊಂದರ 6ನೇ ತರಗತಿ ವಿದ್ಯಾರ್ಥಿ, ಇರಾ ಕಿನ್ನಿಮಜಲು ಬೀಡು ಸುದೇಶ್ ಭಂಡಾರಿ ಅವರ ಪುತ್ರ ಸಮರ್ಜಿತ್ (13) ಮೃತ ಬಾಲಕ
ಶನಿವಾರ ಮುಂಜಾನೆ 5.30ರಿಂದ 6.50ರ ನಡುವೆ ಘಟನೆ ಸಂಭವಿಸಿದೆ. ಬಾಲಕ ಮುಂಜಾನೆ ಯಾವುದೋ ಕಾರಣಕ್ಕೆ ಸಮುಚ್ಚಯದ 5ನೇ ಮಹಡಿಗೆ ಹೋಗಿದ್ದು, ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದ ತಲೆ ಮತ್ತು ಬೆನ್ನು ಮೂಳೆಗೆ ತೀವ್ರ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ 6.57ರ ವೇಳೆಗೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಕಾವೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ವರದಿ (ಯುಡಿಆರ್) ಸಂಖ್ಯೆ 0010/2025 ರ ಅಡಿಯಲ್ಲಿ 194 ಬಿಎನ್ಎಸ್, 2023ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಹುಡುಗ ಬೀಳುವ ಒಂದು ಹಂತದ ದೃಶ್ಯಗಳು ಸಿಸಿ ಕೆಮರಾದಲ್ಲಿ ದಾಖಲಾಗಿದ್ದು, ಮಹಡಿಯ ಮೇಲಿನ ದೃಶ್ಯಗಳು ದಾಖಲಾಗಿಲ್ಲ. ಹಾಗಾಗಿ ಆತ ಬೀಳಲು ಕಾರಣ ಏನು ಎನ್ನುವುದು ಇನ್ನೂ ನಿಗೂಢವಾಗಿದೆ ಎನ್ನುತ್ತಾರೆ ಬಾಲಕನ ಕುಟುಂಬಸ್ಥರು. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಮರಣೋತ್ತರ ಪರೀಕ್ಷೆ ನಡೆದ ಕುಂಟಿಕಾನದ ಖಾಸಗಿ ಆಸ್ಪತ್ರೆಯಲ್ಲಿ ಸಾಕಷ್ಟು ಮಂದಿ ಸೇರಿದ್ದರು. ಸಂಜೆ ಕದ್ರಿಯ ರುದ್ರಭೂಮಿಯಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.