ಭಾರತೀಯ ಸೇನೆಗೆ ಬೆಂಬಲ ಕೋರಿ, ದೇಶದ ಹಿತರಕ್ಷಣೆಗಾಗಿ ಶ್ರೀ ಕೋಟಿಲಿಂಗೇಶ್ವರನಿಗೆ ವಿಶೇಷ ಪೂಜೆ

Views: 115
ಕನ್ನಡ ಕರಾವಳಿ ಸುದ್ದಿ: ಭಾರತೀಯ ಸೈನ್ಯ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ ಘನಕಾರ್ಯವನ್ನು ಅಭಿನಂದಿಸಲು ರಾಜ್ಯ ಮುಜರಾಯಿ ಇಲಾಖೆಯ ಸೂಚನೆಯತೆ ಕೋಟೇಶ್ವರದ ಐತಿಹಾಸಿಕ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ದೇವರಿಗೆ ಗುರುವಾರ ಬೆಳಿಗ್ಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.
ದೇವರಿಗೆ ಸಂಕಲ್ಪ ಪೂರ್ವಕ ಫಲ – ಪುಷ್ಪ ಸಮರ್ಪಣೆ ಮಾಡಿದ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಯೋಧರು ಮತ್ತು ರೈತರು ದೇಶದ ಬೆನ್ನೆಲುಬು. ಜೀವದ ಹಂಗು ತೊರೆದು ಯೋಧರು ಗಡಿಯಲ್ಲಿ ದೇಶರಕ್ಷಣೆಯ ಮಹತ್ಕಾರ್ಯದಲ್ಲಿ ತೊಡಗಿದ್ದಾರೆ. ಎಲ್ಲ ಭಾರತೀಯ ಯೋಧರು ಮತ್ತವರ ಕುಟುಂಬದವರ ಸರ್ವತ್ರ ಕ್ಷೇಮವನ್ನು ಕೋರಿ ಶ್ರೀ ಕೋಟಿಲಿಂಗೇಶ್ವರನಿಗೆ ಭಾರತೀಯ ಸೈನಿಕರ ಹೆಸರಿನಲ್ಲಿ ರುದ್ರಾಭಿಷೇಕ ಮತ್ತು ಎಲ್ಲ ಮಾತೆಯರ ಸಿಂಧೂರ ರಕ್ಷಣೆ ಕೋರಿ ಶ್ರೀ ಪಾರ್ವತಿ ಅಮ್ಮನವರಿಗೆ ಕುಂಕುಮಾರ್ಚನೆಯನ್ನು ನೆರವೇರಿಸಲಾಗಿದೆ. ಯುದ್ಧದ ಕಾರ್ಮೋಡ ತಿಳಿಗೊಂಡು, ದೇಶದ ಎಲ್ಲ ಶತ್ರುಗಳೂ ನಾಶವಾಗಿ, ಶಾಂತಿ ನೆಲೆಸುವವರೆಗೂ ಪ್ರತಿದಿನವೂ ಸೈನಿಕರು ಮತ್ತವರ ಕುಟುಂಬದವರ ಕ್ಷೇಮ ಹಾಗೂ ಸಮಗ್ರ ದೇಶದ ಹಿತ ಕೋರಿ ರುದ್ರಾಭಿಷೇಕ ಮತ್ತು ಕುಂಕುಮಾರ್ಚನೆಯನ್ನು ನೆರವೇರಿಸಲಾಗುವುದು ಎಂದರು.
ಪರ್ಯಾಯ ಅರ್ಚಕ ಗಣೇಶ ಅಡಿಗ ಪೂಜೆ ನೆರವೇರಿಸಿ ಆಶೀರ್ವದಿಸಿದರು. ಈ ವೇಳೆ ತಂತ್ರಿ ಪ್ರಸನ್ನಕುಮಾರ್ ಐತಾಳ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ, ಪ್ರಸಂಗಕರ್ತ ಡಾ. ಬಸವರಾಜ್ ಶೆಟ್ಟಿಗಾರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ ಎಸ್ ನೇತ್ರಾವತಿ, ಉಷಾ, ಗಾಯತ್ರಿ, ರಾಜೀವ ಶೆಟ್ಟಿ, ಡಾ. ಸುಧಾಕರ ನಂಬಿಯಾರ್, ಗಣಪ ಪೂಜಾರಿ, ಸಹಾಯಕ ಪ್ರಸಾದ್ ರಾವ್ ಹಾಗೂ ಭಕ್ತ ಸಮೂಹ ಉಪಸ್ಥಿತರಿದ್ದರು.
ರಥಬೀದಿಯಲ್ಲಿನ ಶ್ರೀ ಮಹಾದೇವಿ ಮಾರಿಯಮ್ಮ ದೇವಾಲಯದಲ್ಲೂ ವಿಶೇಷ ಪೂಜೆ ನೆರವೇರಿಸಲಾಯಿತು. ಅರ್ಚಕ ಸುರೇಶ್ ಜೋಗಿ ಶ್ರೀ ದೇವಿಗೆ ಕುಂಕುಮಾರ್ಚನೆ ಸಹಿತ ವಿಶೇಷ ಪೂಜೆ ಸಲ್ಲಿಸಿ, ಸೈನಿಕರು ಮತ್ತು ದೇಶದ ಹಿತರಕ್ಷಣೆಗಾಗಿ ಪ್ರಾರ್ಥಿಸಿದರು. ದೇವಳ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ದಾರ ಸಮಿತಿಯವರು, ಭಕ್ತರು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ದೇವಾಲಯಗಳು, ಮನೆಗಳಲ್ಲೂ ಯೋಧರ ಕ್ಷೇಮ ಕೋರಿ ವಿಶೇಷ ಪೂಜೆ ಹೋಮ ಹವನಗಳನ್ನು ನಡೆಸಿದ ಬಗ್ಗೆ ವರದಿಗಳು ಬಂದಿವೆ.