ನಿವೃತ್ತ ಐಎಎಸ್ ಅಧಿಕಾರಿ, ಹಿರಿಯ ನಟ ಕೆ. ಶಿವರಾಮ್ ನಿಧನ

Views: 171
ಬೆಂಗಳೂರು: ಹೃದಯಾಘಾತದಿಂದ ಅಸ್ವಸ್ಥರಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಎಐಎಸ್ ಅಧಿಕಾರಿ, ಬಿಜೆಪಿ ಮುಖಂಡ ಹಾಗೂ ಹಿರಿಯ ನಟ ಕೆ. ಶಿವರಾಂ ಚಿಕಿತ್ಸೆಗೆ ಫಲಿಸದೇ ಇಂದು ವಿಧಿವಶರಾಗಿದ್ದಾರೆ.
ಶಿವರಾಮ್ ಅವರಿಗೆ 71 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅಸ್ವಸ್ಥರಾಗಿದ್ದ ಅವರನ್ನು ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.
ನಿನ್ನೆಯಷ್ಟೇ ಶಿವರಾಮ್ ಅಳಿಯ ಹಾಗೂ ನಟ ಪ್ರದೀಪ್ ಮಾತನಾಡಿ, ಕನ್ನಡದಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದವರು ನಮ್ಮ ಮಾವ ಶಿವರಾಮ್ ಅವರು ಫೆ.3ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಬಾರಿ ಅವರಿಗೆ ಒಂದು ಸಣ್ಣ ಶಸ್ತ್ರ ಚಿಕಿತ್ಸೆ ಆಗಿತ್ತು. ಅದೇ ಡಾಕ್ಟರ್ ಇಲ್ಲಿ ಇರುವುದರಿಂದ ನಾವು ಇಲ್ಲಿಗೆ ದಾಖಲು ಮಾಡಿದ್ದೆವು. ಆಸ್ಪತ್ರೆಗೆ ಅಡ್ಮಿಟ್ ಆದಮೇಲೆ ಲೋ ಬಿಪಿ ಸಮಸ್ಯೆ ಶುರುವಾಯ್ತು. ಅವರಿಗೆ ಟ್ರೀಟ್ಮೆಂಟ್ ನಡೆಯುತ್ತಿದೆ.
ಕಳೆದ 5-6 ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತ ಆಗಿತ್ತು. ಅಲ್ಲಿಂದ ಪರಿಸ್ಥಿತಿ ಕೊಂಚ ಗಂಭೀರವಾಗಿದೆ. ಸದ್ಯ ಅವರ ಪರಿಸ್ಥಿತಿ ಚಿಂತಾಜನಕವಾಗಿಯೇ ಇದೆ. ಅವರಿಗೆ ಸಿಕ್ಕಾಪಟ್ಟೆ ಬಿಪಿ ಸಮಸ್ಯೆ ಇತ್ತು. ಅವರ ಬಿಪಿ ಕಂಟ್ರೋಲ್ಗೆ ಸಿಕ್ತಾ ಇಲ್ಲ. ಒಂದು ಸಲ ಜಾಸ್ತಿ ಇದ್ದರೆ, ಮತ್ತೊಂದು ಸಲ ಕಡಿಮೆ ಇರುತ್ತದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ ಎಂದು ನಟ ಪ್ರದೀಪ್ ತಿಳಿಸಿದ್ದಾರೆ.
ಕೆ. ಶಿವರಾಮ್ ಅವರು 1953, ಏಪ್ರಿಲ್ 6ರಂದು ರಾಮನಗರ ಜಿಲ್ಲೆಯ ಉರಗಲ್ಲಿಯಲ್ಲಿ ಜನಿಸಿದರು. ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬೆಂಗಳೂರಿಗೆ ತೆರಳಿ ಮಲ್ಲೇಶ್ವರಂ ಸರ್ಕಾರಿ ಶಾಲೆಯಲ್ಲಿ ಪ್ರೌಢಶಾಲೆ ಓದಿದರು. 1972ರಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿದರು. ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಟೈಪಿಂಗ್ ಮತ್ತು ಶೀಘ್ರಲಿಪಿ ಕೋರ್ಸ್ ಪೂರ್ಣಗೊಳಿಸಿ ಸರ್ಕಾರಿ ಉದ್ಯೋಗಕ್ಕೆ ಸೇರಿದರು.
1973 ಮೇ ತಿಂಗಳಲ್ಲಿ ಪೊಲೀಸ್ ವರದಿಗಾರರಾಗಿ ಭಾರತೀಯ ಅಪರಾಧ ತನಿಖಾ ಇಲಾಖೆ ಸೇರಿದರು. ಸೇವೆಯಲ್ಲಿದ್ದಾಗ ಅಧ್ಯಯನವನ್ನು ಮುಂದುವರೆಸಿದರು. ವಿವಿ ಪುರಂ ಈವನಿಂಗ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಕಾಮರ್ಸ್ನಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದರು. ಬಳಿಕ 1982 ರಲ್ಲಿ ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1985ರಲ್ಲಿ ಶಿವರಾಮ್ ಅವರು KAS ಪರೀಕ್ಷೆಯಲ್ಲಿ ತೇರ್ಗಡೆಯಾದರು ಮತ್ತು ಉಪ ಪೊಲೀಸ್ ಅಧೀಕ್ಷಕರಾಗಿ ಆಯ್ಕೆಯಾದರು.
1986ರಲ್ಲಿ ಕರ್ನಾಟಕ ಆಡಳಿತ ಸೇವಾ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯದಲ್ಲಿ 1ನೇ ರ್ಯಾಂಕ್ ಗಳಿಸಿದರು ಮತ್ತು ಸಹಾಯಕ ಪೊಲೀಸ್ ಕಮಿಷನರ್ ಆಗಿ ಆಯ್ಕೆಯಾದರು. ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ, ನಾಗರಿಕ ಸೇವಾ ಪರೀಕ್ಷೆಯಲ್ಲಿ (ಯುಪಿಎಸ್ಸಿ) ತೇರ್ಗಡೆಯಾಗಿ ಬಾಲ್ಯದ ಕನಸಾಗಿದ್ದ ಐಎಎಸ್ಗೆ ಆಯ್ಕೆಯಾದರು. ಕನ್ನಡ ಭಾಷೆಯಲ್ಲಿ IAS ಪರೀಕ್ಷೆಯಲ್ಲಿ ತೇರ್ಗಡೆಯಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಶಿವರಾಂ ಪಾತ್ರರಾಗಿದ್ದಾರೆ.
ನಟನಾ ಕ್ಷೇತ್ರದಲ್ಲೂ ಶಿವರಾಮ್ ಮಿಂಚು ಹರಿಸಿದ್ದಾರೆ. 1993ರಲ್ಲಿ ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು. ಮೊದಲ ಸಿನಿಮಾದಲ್ಲೇ ಅದ್ಭುತ ಯಶಸ್ಸಿನೊಂದಿಗೆ ಒಳ್ಳೆಯ ಹೆಸರು ಸಹ ಮಾಡಿದರು. ಇದಾದ ಬಳಿಕ ವಸಂತ ಕಾವ್ಯ, ಸಾಂಗ್ಲಿಯಾನ ಭಾಗ 3, ಪ್ರತಿಭಟನೆ, ಖಳನಾಯಕ, ಯಾರಿಗೆ ಬೇಡ ದುಡ್ಡು, ನಾಗಾ, ಓ ಪ್ರೇಮ ದೇವತೆ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ತಮ್ಮ ಅಳಿಯ ಪ್ರದೀಪ್ ಅಭಿನಯದ ಟೈಗರ್ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದರು. ಈ ಸಿನಿಮಾದಲ್ಲಿ ಅವರು ಪ್ರದೀಪ್ ತಂದೆಯ ಪಾತ್ರ ಮಾಡಿದರು.