ನಾನು ಜೈಲಿನಲ್ಲಿರುವುದರಿಂದ ಸಾರ್ವಜನಿಕ ಕಲ್ಯಾಣದ ಕೆಲಸಗಳು ನಿಲ್ಲಬಾರದು:ಕೇಜ್ರಿವಾಲ್

Views: 35
ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ಬಳಿಕ ಪತ್ನಿ ಸುನೀತಾ ಕೇಜ್ರಿವಾಲ್ ಇಂದು ಸುದ್ದಿಗೋಷ್ಠಿ ನಡೆಸಿದರು. ಕೋಟ್ಯಾಂತರ ಜನರ ಪ್ರಾರ್ಥನೆ ಕೇಜ್ರಿವಾಲ್ ಜೊತೆಗಿದೆ. ದೆಹಲಿಯ ಜನರು ದೇವಸ್ಥಾನಕ್ಕೆ ಹೋಗಿ ಕೇಜ್ರಿವಾಲ್ಗಾಗಿ ಪ್ರಾರ್ಥಿಸಬೇಕು. ಕೇಜ್ರಿವಾಲ್ ಅವರು ನೀಡಿದ ಪ್ರತಿ ಭರವಸೆಯನ್ನು ಉಳಿಸಿಕೊಂಡಿದ್ದಾರೆ ಎಂದರು.
ಇದೇ ವೇಳೆ ಪತಿ ಕೇಜ್ರಿವಾಲ್ ಅವರು ಜೈಲಿನಿಂದ ಕಳುಹಿಸಿದ್ದ ಸಂದೇಶವನ್ನು ಓದಿದರು. ಈ ಸಂದೇಶದಲ್ಲಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿರುವ ಕೇಜ್ರಿವಾಲ್, ಬಿಜೆಪಿಯವರನ್ನು ದ್ವೇಷಿಸದಂತೆ ಮನವಿ ಕೂಡ ಮಾಡಿಕೊಂಡಿದ್ದಾರೆ
ಕೇಜ್ರಿವಾಲ್ ಬರೆದ ಪತ್ರದಲ್ಲಿ ನಾನು ಜೈಲಿಗೆ ಹೋಗಿರುವುದರಿಂದ ಸಮಾಜ ಕಲ್ಯಾಣ ಮತ್ತು ಸಾರ್ವಜನಿಕ ಕಲ್ಯಾಣದ ಕೆಲಸಗಳು ನಿಲ್ಲಬಾರದು ಎಂದು ಆಮ್ ಆದ್ಮಿ ಪಕ್ಷದ ಎಲ್ಲಾ ಕಾರ್ಯಕರ್ತರಲ್ಲಿ ನಾನು ಮನವಿ ಮಾಡುತ್ತೇನೆ. ಬಿಜೆಪಿಯವರನ್ನು ದ್ವೇಷಿಸಬೇಡಿ. ಅವರು ನಮ್ಮ ಸಹೋದರ ಸಹೋದರಿಯರು. ನಾನು ಶೀಘ್ರದಲ್ಲಿ ಮರಳುತ್ತೇನೆ
ಭಾರತದ ಒಳಗೆ ಮತ್ತು ಹೊರಗೆ ಅನೇಕ ಶಕ್ತಿಗಳು ದೇಶವನ್ನು ದುರ್ಬಲಗೊಳಿಸುತ್ತಿವೆ. ನಾವು ಜಾಗರೂಕರಾಗಿರಬೇಕು, ಈ ಶಕ್ತಿಗಳನ್ನು ಗುರುತಿಸಬೇಕು ಮತ್ತು ಅವುಗಳನ್ನು ಸೋಲಿಸಬೇಕು. ಕೇಜ್ರಿವಾಲ್ ಕಂಬಿ ಹಿಂದೆ ಬಿದ್ದಿದ್ದಾರೆ ಎಂದು ದೆಹಲಿಯ ಮಹಿಳೆಯರು ಯೋಚಿಸುತ್ತಿರಬಹುದು. 1,000 ಸಿಗುತ್ತದೋ ಇಲ್ಲವೋ ಯಾರಿಗೆ ಗೊತ್ತು ಅಂತಾ ಹೇಳುತ್ತಿರಬಹುದು. ಆದರೆ ಅವರಿಗೆ ನಾನು ಈ ಮೂಲಕ ಹೇಳುತ್ತಿರುವುದೇನೆಂದರೆ ಅವರ ಸಹೋದರ, ಮಗನನ್ನು ನಂಬುವಂತೆ ನಾನು ಅವರಿಗೆ ಮನವಿ ಮಾಡುತ್ತೇನೆ. ನಾನು ಶೀಘ್ರದಲ್ಲೇ ಹೊರಗೆ ಬಂದು ನನ್ನ ಭರವಸೆಗಳನ್ನೆಲ್ಲಾ ಈಡೇರಿಸುತ್ತೇನೆ ಎಂದು ಹೇಳಿದ್ದಾರೆ.
ಜೈಲಿನ ಒಳಗಿರಲಿ ಅಥವಾ ಹೊರಗಿರಲಿ, ನನ್ನ ಜೀವನದ ಪ್ರತಿ ಕ್ಷಣವೂ ದೇಶ ಸೇವೆಗೆ ಮುಡಿಪಾಗಿದೆ. ನನ್ನ ಪ್ರತಿಯೊಂದು ರಕ್ತದ ಹನಿಯೂ ದೇಶಕ್ಕಾಗಿ ಸಮರ್ಪಿತವಾಗಿದೆ. ಭಾರತವನ್ನು ವಿಶ್ವದ ಬಲಿಷ್ಠ ಮತ್ತು ಶ್ರೇಷ್ಠ ದೇಶವಾಗಿ ರೂಪಿಸಬೇಕಿದೆ. ದೇಶವನ್ನು ದುರ್ಬಲಗೊಳಿಸಲು ಆಂತರಿಕ ಮತ್ತು ಬಾಹ್ಯ ಶಕ್ತಿಗಳು ಪ್ರಯತ್ನಿಸುತ್ತಿದ್ದು, ಇವುಗಳ ವಿರುದ್ಧ ಹೋರಾಡಬೇಕಾಗಿದೆ ಎಂದು ಕೇಜ್ರಿವಾಲ್ ತಮ್ಮ ಸಂದೇಶದಲ್ಲಿ ಕೇಜ್ರಿವಾಲ್ ತಿಳಿಸಿದ್ದಾರೆ.