ಜೆಡಿಎಸ್ಗೆ ಮಂಡ್ಯ ಬಿಟ್ಟು ಕೊಟ್ಟ ಬಿಜೆಪಿ: ಸುಮಲತಾ ಮುಂದಿನ ನಡೆ ಏನು?

Views: 48
ಬಿಜೆಪಿ ಹೈಕಮಾಂಡ್ ಸಮೀಕ್ಷೆಗಳನ್ನು ಆಧರಿಸಿ ಈ ಸಲ ಮಂಡ್ಯ ಲೋಕಸಭಾ ಕ್ಷೇತ್ರವನ್ನ ಬಿಜೆಪಿ ನಾಯಕರು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದಾರೆ. ಹಾಗಾದ್ರೆ ಸುಮಲತಾ ಮುಂದಿನ ನಡೆ ಏನು? ಸುಮಲತಾ ಮುಂದಿರುವ ಆಯ್ಕೆಗಳ ಬಗ್ಗೆ ಮಾಹಿತಿ ಇಲ್ಲಿದೆ
ಮಂಡ್ಯ ಕ್ಷೇತ್ರದಿಂದ ಟಿಕೆಟ್ ಸಿಗುವ ಬಗ್ಗೆ ಶೇಕಡಾ 100 ಅಲ್ಲ 500 ರಷ್ಟು ವಿಶ್ವಾಸವಿದೆ ಎಂದು ಹಾಲಿ ಮಂಡ್ಯ ಸಂಸದೆ ಸುಮಲತಾ ಹೇಳಿದ್ದರು. ಅಲ್ಲದೇ ಮಂಡ್ಯ ಬಿಟ್ಟು ರಾಜಕೀಯ ಮಾಡಲ್ಲ, ಮಂಡ್ಯ ಬಿಟ್ಟು ನಾನು ಯಾಕೆ ಬೆಂಗಳೂರು ಉತ್ತರ ಹಾಗೂ ಚಿಕ್ಕಬಳ್ಳಾಪುರಕ್ಕೆ ಹೋಗಲಿ ಎಂದು ಸುಮಲತಾ ಹೇಳಿದ್ರು. ಹೀಗಾಗಿ ಸುಮಲತಾ ಅವರ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.
ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರು ಮತ್ತೆ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಇಷ್ಟು ದಿನ ಮಂಡ್ಯ ಟಿಕೆಟ್ ಸಿಗುವ ಭರವಸೆಯಲ್ಲಿದ್ದ ಸುಮಲತಾ ಅಂಬರೀಶ್ ಅವರಿಗೆ ಅತಿಯಾದ ನಂಬಿಕೆಯೇ ಮುಳುವಾಗಿದ್ದು, ಆಪ್ತರ ಜೊತೆಗೆ ಮಂಡ್ಯದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಕುರಿತು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ. ಮಂಡ್ಯದಿಂದ ಸುಮಲತಾ ಪಕ್ಷೇತರರಾಗಿ ನಿಂತ್ರೆ ಕಳೆದ ಸಲ ಸಿಕ್ಕಂತೆ ಸ್ವಾಭಿಮಾನದ ಮತಗಳು ಈ ಸಲ ಸಿಗಲ್ಲ. ಸುಮಲತಾ ಸ್ಪರ್ಧೆ ಮಾಡಿದ್ರು ಗೆಲುವು ಸುಲಭವಲ್ಲ
ಸುಮಲತಾ ಅವರು ಸ್ವಾಭಿಮಾನದ ಸಂಕೇತದಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ರು, ಇದೀಗ ಮೈತ್ರಿಯಿಂದಾಗಿ ಮಂಡ್ಯ ಕ್ಷೇತ್ರ ಜೆಡಿಎಸ್ ನಾಯಕರ ಕೈ ಸೇರಿದೆ. ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರಿಗೆ ರಾಷ್ಟ್ರಮಟ್ಟದಲ್ಲಿ ಹತ್ತಿರವಾಗಿರುವ ಸುಮಲತಾ ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷ ಸೂಕ್ತ ಸ್ಥಾನಮಾನ ನೀಡಲಿದೆ ಎಂದು ಬಿಜೆಪಿ ನಾಯಕರು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದೀಗ ಸುಮಲತಾ ಅವರು ಹೈಕಮಾಂಡ್ ಮಾತಿನಂತೆ ಸ್ಪರ್ಧೆಯಿಂದ ಹಿಂದೆ ಸರಿದರೇ ಅವರಿಗೆ ಮುಂದಿನ ದಿನಗಳಲ್ಲಿ ರಾಜ್ಯಸಭೆಗೆ ಕಳುಹಿಸುವ ಮೂಲಕ ಮಂತ್ರಿ ಸ್ಥಾನವನ್ನ ನೀಡಬಹುದು ಎಂದು ಕೇಳಲಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಸಂಕೇತವಾಗಿ ಗೆಲುವು ಕಂಡಿದ್ದ ಸುಮಲತಾ ಅಂಬರೀಶ್ ಅವರಿಗೆ ಈ ಬಾರಿ ಬಿಜೆಪಿಯಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದು, ಪಟ್ಟು ಹಿಡಿದು ಜೆಡಿಎಸ್ ಕ್ಷೇತ್ರವನ್ನ ಪಡೆದುಕೊಂಡಿದ್ದಾರೆ. ಒಂದು ವೇಳೆ ಸುಮಲತಾ ಅಂಬರೀಶ್ ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡಿದರೇ ಗೆಲ್ಲುವುದು ಕಷ್ಟ. ಆದರೆ, ಸುಮಲತಾ ಅವರ ಸ್ಪರ್ಧೆಯಿಂದ ಮೈತ್ರಿಯಲ್ಲಿ ಬಿರುಕು ಮೂಡುತ್ತಾ? ಅಥವಾ ಹೈಕಮಾಂಡ್ ಮಾತಿನಂತೆ ಸುಮಲತಾ ಅವರು ಮೈತ್ರಿ ಅಭ್ಯರ್ಥಿಗಳ ಪರ ಪ್ರಕಾರ ನಡೆಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.